ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಹೈಕೋರ್ಟ್​ನಲ್ಲಿ ಇಂದು ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ.

Oct 22, 2024 - 11:26
 4
ಹೈಕೋರ್ಟ್​ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ಗೆ ಕೆಳಹಂತದ ನ್ಯಾಯಾಲಯದಲ್ಲಿ ಜಾಮೀನು ಸಿಗಲಿಲ್ಲವಾದ ಕಾರಣ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್​ನಲ್ಲಿ ಇಂದು (ಅಕ್ಟೋಬರ್ 22) ಮೊದಲ ಬಾರಿಗೆ ವಿಚಾರಣೆ ನಡೆದಿದ್ದು, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದ್ದಾರೆ. ಸಿಸಿಎಚ್ ನ್ಯಾಯಾಲಯದಲ್ಲಿ ದರ್ಶನ್ ಪರವಾಗಿ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರೇ ಹೈಕೋರ್ಟ್​ನಲ್ಲಿಯೂ ವಾದ ಮಂಡಿಸುತ್ತಿದ್ದು, ದರ್ಶನ್​ಗೆ ಜಾಮೀನು ಕೊಡಿಸುವ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.

ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆದಿದೆ. ಸಿವಿ ನಾಗೇಶ್ ಅವರು ದರ್ಶನ್ ಪರವಾಗಿ ವಾದ ಮಂಡನೆ ಆರಂಭಿಸಿ, ದರ್ಶನ್​ಗೆ ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದು, ಅವರನ್ನು ನಿನ್ನೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್​ಗೆ ಚಿಕಿತ್ಸೆಯ ಅಗತ್ಯವಿದೆ. ಹಾಗಾಗಿ ಜಾಮೀನು ಕೋರುತ್ತಿದ್ದೇವೆ ಎಂದು ಹೇಳಿದರು. ಸಿವಿ ನಾಗೇಶ್ ಅವರ ಮಾತು ಆಲಿಸಿ, ಜೈಲಧಿಕಾರಿಗಳಿಂದ ದರ್ಶನ್​ರ ಆರೋಗ್ಯ ಸ್ಥಿತಿಯ ವರದಿಯನ್ನು ಕೇಳಿದರು. ಬಳಿಕ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಯ್ತು.

ಅಕ್ಟೋಬರ್ 28ರ ಒಳಗಾಗಿ ಬಳ್ಳಾರಿ ಜೈಲು ಅಧಿಕಾರಿಗಳು ದರ್ಶನ್​ರ ಆರೋಗ್ಯ ಸ್ಥಿತಿಯ ಬಗ್ಗೆ ವರದಿಯನ್ನು ಹೈಕೋರ್ಟ್​ಗೆ ನೀಡಬೇಕಿದ್ದು, ವರದಿ ಆಧರಿಸಿ ದರ್ಶನ್​ಗೆ ಜಾಮೀನು ನೀಡಬೇಕೊ ಇಲ್ಲವೋ ಅಥವಾ ಜೈಲಿನಲ್ಲಿಯೇ ಚಿಕಿತ್ಸೆ ಮುಂದುವರೆಸಬೇಕೋ ಎಂಬುದನ್ನು ನಿಶ್ಚಯ ಮಾಡಲಾಗುತ್ತದೆ.ಈ ಹಿಂದೆ ದರ್ಶನ್ ಬೆಂಗಳೂರಿನ ಜೈಲಿನಲ್ಲಿದ್ದಾಗಲೂ ಸಹ ಜೈಲು ಅಧಿಕಾರಿಗಳು ಆರೋಗ್ಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಆಗ ಜಾಮೀನು ಅರ್ಜಿಗಾಗಿ ಅಲ್ಲದೆ, ದರ್ಶನ್​ಗೆ ಮನೆಯಿಂದ ವಿಶೇಷ ಸೌಲಭ್ಯ ಪಡೆಯಲು ಹಾಕಿದ್ದ ಅರ್ಜಿಯ ವಿಚಾರಣೆ ಸಮಯದಲ್ಲಿ ವರದಿ ನೀಡಲಾಗಿತ್ತು. ಆದರೆ ನ್ಯಾಯಾಲಯವು ಆಗಲೂ ಸಹ ವಿಶೇಷ ಸೌಲಭ್ಯವನ್ನು ಪಡೆಯುವಂತಿಲ್ಲ ಎಂದಿತ್ತು.