ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು
ಎನ್ಐಎ ತಂಡಗಳ ಬಿಗಿ ಭದ್ರತೆಯೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಯ ಪಾಲಂ ಏರ್ಪೋರ್ಟ್ನ ಟರ್ಮಿನಲ್ 1ನಲ್ಲಿ ಬಂದಿಳಿಯಲಿದ್ದಾನೆ. ಇಲ್ಲಿಂದ ಅವನನ್ನ ಎನ್ಐಎ ಕೇಂದ್ರ ಕಚೇರಿಗೆ ಕರೆದೊಯ್ಯಲು ವಿಶೇಷ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ.

ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಇಂದು ಮಧ್ಯಾಹ್ನ ಭಾರತಕ್ಕೆ ಬಂದಿಳಿಯಲಿದ್ದಾನೆ. ಎನ್ಐಎ ತಂಡಗಳ ಬಿಗಿ ಭದ್ರತೆಯೊಂದಿಗೆ ವಿಶೇಷ ವಿಮಾನದಲ್ಲಿ ದೆಹಲಿಯ ಪಾಲಂ ಏರ್ಪೋರ್ಟ್ನ ಟರ್ಮಿನಲ್ 1ನಲ್ಲಿ ಬಂದಿಳಿಯಲಿದ್ದಾನೆ. ಇಲ್ಲಿಂದ ಅವನನ್ನ ಎನ್ಐಎ ಕೇಂದ್ರ ಕಚೇರಿಗೆ ಕರೆದೊಯ್ಯಲು ವಿಶೇಷ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ. ಅದಕ್ಕಾಗಿ ಎನ್ಐಎ ಕಚೇರಿ ಹೊರಗಿನ ಭದ್ರತೆ ಪರಿಶೀಲಿಸಲು ದಕ್ಷಿಣ ಡಿಸಿಪಿ ಸ್ಥಳಕ್ಕೆ ತೆರಳಿದ್ದಾರೆ.
ಎನ್ಐಎ ಮೂಲಗಳ ಪ್ರಕಾರ, ಈಗಾಗಲೇ ರಾಣಾನನ್ನ ಸೇಫಾಗಿ ಎನ್ಐಎ ಕಚೇರಿಗೆ ಕರೆತರಲು ಮಾರ್ಕ್ಸ್ಮನ್ ವಿಶೇಷ ಬುಲೆಟ್ ಪ್ರೂಫ್ ವಾಹನವನ್ನ ಪಾಲಂ ಏರ್ಪೋರ್ಟ್ನಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ವಿಭಾಗದ SWAT ಕಾಂಡೋಗಳನ್ನೂ ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಭದ್ರತಾ ವಿಭಾಗ ಮತ್ತು ಸ್ಥಳೀಯ ಪೊಲೀಸರು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಲರ್ಟ್ ಆಗಿದ್ದಾರೆ.
ಮಾರ್ಕ್ಸ್ಮನ್ ಅತ್ಯಂತ ಸುರಕ್ಷಿತವಾದ ಕಾರು, ಬುಲೆಟ್ ನಿಂದ ಮಾತ್ರವಲ್ಲದೇ ಗ್ರೆನೇಡ್ ದಾಳಿ ನಡೆದರೂ ಸಹ ಇದರ ಒಳಗಿರುವವರಿಗೆ ಯಾವುದೇ ಪರಿಣಾಮ ಬೀರುವುದಿಲ್ಲ. ದೊಡ್ಡ ದೊಡ್ಡ ಭಯೋತ್ಪಾದಕರು, ದರೋಡೆಕೋರರನ್ನು ಸಂಬಂಧ ಪಟ್ಟ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದೊಯ್ಯಲು ಈ ವಾಹನವನ್ನ ಬಳಸಲಾಗುತ್ತದೆ.
ರಾಣಾ ಭಾರತಕ್ಕೆ ತಲುಪಿದ ಕೂಡಲೇ ಎನ್ಐಎ ತಂಡ ಅಧಿಕೃತವಾಗಿ ಕಸ್ಟಡಿಗೆ ತೆಗೆದುಕೊಳ್ಳಲಿದೆ. ಮೊದಲು ಎನ್ಐಎ ಕಚೇರಿಗೆ ಕರೆತರಲಿದ್ದು, ಕೆಲ ಕಾಲ ವಿಚಾರಣೆ ಬಳಿಕ ಪಟಿಯಾಲ ಹೌಸ್ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಯಿದೆ. ಕೋರ್ಟ್ಗೆ ಹಾಜರುಪಡಿಸುವುದಕ್ಕೂ ಮುನ್ನ ಎನ್ಐಎ ಅಧಿಕಾರಿಗಳ ಭದ್ರತೆಯಲ್ಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ದೆಹಲಿ ತಿಹಾರ್ ಜೈಲಿನ ಹೈಸೆಕ್ಯುರಿಟಿ ವಾರ್ಡ್ನಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.