ದಾಂಪತ್ಯ ವಿರಸ- ಮೂವರು ಮಕ್ಕಳಿಗೆ ವಿಷ ಕುಡಿಸಿ, ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಸಾವು ಬದುಕಿನ ಮಧ್ಯೆ ತಾಯಿ-ಮಕ್ಕಳ ಹೋರಾಟ

Oct 21, 2024 - 07:00
 8
ದಾಂಪತ್ಯ ವಿರಸ- ಮೂವರು ಮಕ್ಕಳಿಗೆ ವಿಷ ಕುಡಿಸಿ, ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕಲಬುರಗಿ: ಗಂಡ ಹೆಂಡತಿ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಸ್ವತಃ ತಾಯಿ ತನ್ನ ಮೂವರು ಮಕ್ಕಳಿಗೆ ಜ್ಯೂಸ್ ಬಾಟಲಿಯಲ್ಲಿ ವಿಷ ಬೆರೆಸಿ ಕುಡಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಂಚೋಳಿ (Chincholi) ತಾಲ್ಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.ಗೀತಾಬಾಯಿ ಸಂತೋಷ್ ರಾಠೋಡ್ (30) ಗಂಡನ ಮೇಲಿನ ಸಿಟ್ಟಿಗೆ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಮಕ್ಕಳಾದ ಚೈತನ್ಯ (4) ಧನುಷ್ (3) ಲಕ್ಷ್ಮಿಗೆ (ಒಂದುವರೆ ತಿಂಗಳು) ಕುಡಿಸಿದ್ದಾಳೆ. ಈ ಪೈಕಿ ಹಸುಗೂಸು ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಈ ಮಧ್ಯೆ ಹೀಗೆ ಜಗಳ ನಡೆದ ಬಳಿಕ ಗೀತಾ ಮಕ್ಕಳಿಗೆ ಹೊಡೆದಾಗಲೆಲ್ಲಾ ಆತ ಪತ್ನಿಯನ್ನು ದಬಾಯಿಸುತ್ತಿದ್ದ ಎಂದು ಹೇಳಲಾಗಿದೆ. ಭಾನುವಾರ ಸಹ ಇದೇ ರೀತಿ ದಂಪತಿ ಮಧ್ಯೆ ಪರಸ್ಪರ ವಾಗ್ಯುದ್ಧ ನಡೆದ ಬಳಿಕ ಸಂತೋಷ್ ಹೊರಗೆ ಕೆಲಸಕ್ಕೆ ಹೋದ ನಂತರ ಗೀತಾ ಗಂಡನ ಮೇಲಿನ ಸಿಟ್ಟಿನಿಂದ ಮನನೊಂದು ಇಂತಹ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ.

ವಿಷ ಕುಡಿದ ಬಳಿಕ ತೀವ್ರ ಸ್ವರೂಪದ ಹೊಟ್ಟೆ ನೋವು ಹಾಗೂ ಅಸಹನೀಯ ಸಂಕಟದಿಂದ ಮಕ್ಕಳು ಚೀರಾಡುತ್ತಿದ್ದರು. ಇದನ್ನು ಗಮನಿಸಿದ ನೆರೆಹೊರೆಯ ಮಂದಿ ಧಾವಿಸಿದಾಗ ಗೀತಾ ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಕುಡಿಸಿರುವುದು ಗೊತ್ತಾಯಿತು. ತಕ್ಷಣ ಆಕೆಯ ಪತಿ ಸಂತೋಷನಿಗೆ ಮಾಹಿತಿ ತಲುಪಿಸಿ ತಾಯಿ-ಮಕ್ಕಳನ್ನು ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ಬೀದರ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.