ಹಾಸನಾಂಬ ದೇಗುಲದ ಇತಿಹಾಸ ಇಲ್ಲಿದೆ

ಹಾಸನದ ಅಧಿದೇವತೆ, ನಾಡಿನ ಶಕ್ತಿದೇವತೆ, ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇಗುಲದ ಬಾಗಿಲ ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ತೆರೆಯಲಾಗುತ್ತದೆ.

Oct 31, 2024 - 09:45
ಹಾಸನಾಂಬ ದೇಗುಲದ ಇತಿಹಾಸ  ಇಲ್ಲಿದೆ

ಹಾಸನ: ಹಾಸನದ ಅಧಿದೇವತೆ, ನಾಡಿನ ಶಕ್ತಿದೇವತೆ, ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ದೇಗುಲದ ಬಾಗಿಲ ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ತೆರೆಯಲಾಗುತ್ತದೆ. ಹಾಸನಾಂಬೆ ದರ್ಶನಕ್ಕೆ ಕೆಲವೇ ದಿನಗಳು ಮಾತ್ರ ಅವಕಾಶವಿರುತ್ತದೆ. ಹೀಗಾಗಿ ರಾಜ್ಯ, ಹೊರ ರಾಜ್ಯಗಳಿಂದಲೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ಗಣ್ಯಾತಿ ಗಣ್ಯರು. ಸಿನಿಮಾ ಸ್ಟಾರ್​ಗಳು, ರಾಜಕಾರಣಿಗಳು ಕೂಡ ಶಕ್ತಿ ದೇವಿಗೆ ಶಿರಬಾಗಿ ನಮಿಸಿ ಸುಖ ಸಮೃದ್ದಿಗಾಗಿ ಮೊರೆ ಇಡುತ್ತಾರೆ.ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24 ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಸಪ್ತ ಮಾತೃಕೆಯರಾದ ಬ್ರಾಹ್ಮಿದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿಯರು ವಾರಣಾಸಿಯಿಂದ ವಾಯು ವಿಹಾರದ ಸಲುವಾಗಿ ದಕ್ಷಿಣದ ಕಡೆಗೆ ಬಂದರು. ಪ್ರಕೃತಿ ಸೊಬಗಿನ ನಾಡು ಹಾಸನಕ್ಕೆ ಮಾರುಹೋಗಿ ಇಲ್ಲೇ ನೆಲಸಿದರು. ಹಾಸನಾಂಬೆಯು ಹಾಸನದಲ್ಲಿ ನೆಲೆಸಿದ್ದರಿಂದ ಇಲ್ಲಿಗೆ ಹಾಸನ ಎಂದು ಹೆಸರು ಬಂತು ಅಂತ ಹೇಳಲಾಗುತ್ತಿದೆ.

ಸಪ್ತ ಮಾತೃಕೆಯರಲ್ಲಿ ವೈಷ್ಣವಿ ಮಹೇಶ್ವರಿ, ಕೌಮಾರಿ ದೇವರಿಯರು ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದರೇ, ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯಲ್ಲಿ ಬ್ರಾಹ್ಮಿ ದೇವಿ ನೆಲಸಿದ್ದಾಳೆ. ಚಾಮುಂಡಿ, ವಾರಾಹಿ, ಇಂದ್ರಾಣಿಯರು ಹಾಸನ ನಗರದಲ್ಲಿ ದೇವಿಗೆರೆಯಲ್ಲಿ ನೆಲೆಸಿದ್ದಾರೆ.ವರ್ಷಕ್ಕೊಮ್ಮೆ ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರ ದೇಗುಲದ ಬಾಗಿಲು ತೆರೆದರೆ ಬಲಿಪಾಡ್ಯಮಿಯ ಮಾರನೆ ದಿನ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲು ಬಂದ್ ಮಾಡಲಾಗುತ್ತೆ. ಮತ್ತೆ ದೇವಿ ದರ್ಶನ ಸಿಗುವದು ವರ್ಷ ಕಳೆದ ಬಳಿಕ. ಈ ವರ್ಷ ಅಕ್ಟೋಬರ್ 24ಕ್ಕೆ ಬಾಗಿಲು ತೆರೆಯಲಾಗಿದ್ದು ನವೆಂಬರ್ 3ಕ್ಕೆಬಾಗಿಲು ಮುಚ್ಚಲಿದೆ. ಒಟ್ಟು 11 ದಿನಗಳು ಹಾಸನಾಂಬೆ ದೇಗುಲದ ಬಾಗಿಲು ತೆರೆದಿರಲಿದ್ದು ಭಕ್ತರಿಗೆ ಮೊದಲ ಹಾಗು ಕೊನೆಯ ದಿನ ಹೊರತು ಪಡಿಸಿ ಉಳಿದ 9 ದಿನಗಳು ದೇವಿ ದರ್ಶನಕ್ಕೆ ಮುಕ್ತ ಅವಕಾಶ ಸಿಗಲಿದೆ.ಈ ವರ್ಷ ಒಟ್ಟು 11 ದಿನಗಳ ಕಾಲ ಶಕ್ತಿದೇವತೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಸಿಕ್ಕಿದ್ದು, ಮೊದಲ ಹಾಗೂ ಕೊನೆಯ ದಿನ ಮಾತ್ರ ಹೊರತುಪಡಿಸಿ ಉಳಿದ 9 ದಿನಗಳು ದಿನದ 24 ಗಂಟೆಗಯೂ ಭಕ್ತರು ನೇರವಾಗಿ ಹಾಸನಾಂಬೆಯನ್ನ ದರ್ಶನ ಪಡೆಯುತ್ತಿದ್ದಾರೆ. ನಡುವೆ ಮಧ್ಯಾಹ್ನದ ಅವಧಿಯಲ್ಲಿ ಹಾಗೂ ಮುಂಜಾನೆ ವೇಳೆಯಲ್ಲಿ ನೈವೇದ್ಯಕ್ಕಾಗಿ ಪೂಜೆ ವೇಳೆ ಒಂದು ಗಂಟೆ ದೇವಿ ದರ್ಶನಕ್ಕೆ ಅವಕಾಶ ಇರುವುದಿಲ್ಲ.ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ಡಿಸಿ ಸಿ ಸತ್ಯಭಾಮ, ಎಸ್ಪಿ ಮೊಹಮದ್ ಸುಜೀತಾ ಹಾಗು ಆಡಳಿತಾದಿಕಾರಿಯಾಗಿರೊ ಉಪವಿಭಾಗ ಅದಿಕಾರಿ ಮಾರುತಿ ಅವರ ನೇತೃತ್ವದಲ್ಲಿ ದೊಡ್ಡಮಟ್ಟದ ತಯಾರಿ ಮಾಡಿ ಉತ್ಸವ ನಡೆಸಲಾಗುತ್ತಿದೆ. ಮೊದಲ ಬಾರಿಗೆ ಹಾಸನದಲ್ಲಿ ಡಬಲ್ ಡೆಕ್ಕರ್ ಬಸ್ ಮೂಲಕ ಹಾಸನ ನಗರದ ಲೈಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಇಸ್ಕಾನ್ ಮೂಲಕ ವಿತರಣೆ ಮಾಡಲಾಗುತ್ತಿರುವ ಶುಚಿ ರುಚಿಯಾದ ಪ್ರಸಾದ ಭಕ್ತರಿಗೆ ಖುಷಿ ನೀಡಿದೆ. ವರ್ಷದಿಂದ ವರ್ಷಕ್ಕೆ ತನ್ನ ಹಿರಿಮೆ ಹೆಚ್ಚಿಸಿಕೊಂಡು ದೊಡ್ಡಮಟ್ಟದಲ್ಲಿ ಹೆಸರು ಗಳಿಸುತ್ತಿರುವ ಪುಣ್ಯಕ್ಷೇತ್ರ ಹಾಸನ ಮಾತ್ರವಲ್ಲ ದೇಶದ ಮೂಲೆ ಮೂಲೆಗಳ ಭಕ್ತರ ಜೊತೆಗೆ ವಿದೇಶಗಳಿಂದಲೂ ಕೂಡ ಭಕ್ತರು ಬಂದು ದರ್ಶನ ಪಡೆಯುತ್ತಿದ್ದಾರೆ.