ಬಿಡದಿ ಟೌನ್ ಶಿಪ್ ಸರಕಾರಿ ರಿಯಲ್ ಎಸ್ಟೇಟ್ ಯೋಜನೆ: ಎಚ್.ಡಿ. ಕುಮಾರಸ್ವಾಮಿ
ಭೂ ಲೂಟಿಕೋರರಿಗೆ ಲಾಭ ಮಾಡಿಕೊಡಲು ಯೋಜನೆ ಮಾಡಿದ್ದಾರೆ ಎಂದು ಕಿಡಿ, ಸರಕಾರ ಮತ್ತು ಭೂ ಮಾಫಿಯಾ ಕೈಜೋಡಿಸಿವೆ ಎಂದು ಗಂಭೀರ ಆರೋಪ ಮಾಡಿದ ಕೇಂದ್ರ ಸಚಿವರು, ಪ್ರಧಾನಿ ಅವರು ಕೃಷಿ, ನೀರಾವರಿ ಭೂಮಿಯಲ್ಲಿ ಟೌನ್ ಶಿಪ್ ಮಾಡಿಲ್ಲ ಎಂದು ಹೇಳಿದ ಕುಮಾರಸ್ವಾಮಿ
ಬೆಂಗಳೂರು, ಜೂನ್ 14: ಬಿಡದಿ ಟೌನ್ಶಿಪ್ ಯೋಜನೆ ಸರಕಾರಿ ರಿಯಲ್ ಎಸ್ಟೇಟ್ ಯೋಜನೆಯಾಗಿದೆ. ಇದು ಸಂಪೂರ್ಣವಾಗಿ ಹಣ ಲೂಟಿ ಮಾಡುವ ಯೋಚನೆಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ನಾಡಿನ ಹಿತಾಸಕ್ತಿ ಅಡಗಿಲ್ಲ. ಭೂ ಮಾಫಿಯ ಹಾಗೂ ಭೂ ಲೂಟಿಕೋರರಿಗೆ ಲಾಭ ಮಾಡಿಕೊಡಲು ಇದನ್ನು ರೂಪಿಸಲಾಗಿದೆ. ಹೀಗಾಗಿ ಇದನ್ನು ನಾನು ಸರಕಾರಿ ರಿಯಲ್ ಎಸ್ಟೇಟ್ ದಂಧೆ ಎಂದು ಕರೆಯುತ್ತೇನೆ ಎಂದು ಹೇಳಿದರು.
ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸಂಚಾರ ದೊಡ್ಡ ಪ್ರಯಾಸವಾಗಿದೆ. ಅದೇನೋ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಿದ್ದರಲ್ಲ, ಅದನ್ನು ಮಾಡುವುದು ಬಿಟ್ಟು ಬಿಡದಿ ರೈತರ ಬದುಕಿಗೆ ಬೆಂಕಿ ಹಾಕಲು ಹೊರಟಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
ಬೆಂಗಳೂರು ಅಭಿವೃದ್ಧಿಗೆ ಎಳ್ಳಷ್ಟು ಉಪಯೋಗ ಆಗದ ಈ ಯೋಜನೆಯನ್ನು ತಮ್ಮ ಸ್ವಾರ್ಥಕ್ಕಾಗಿ, ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈಜೋಡಿಸಿ ರೈತರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದ್ದಾರೆ. ಈ ಹಿನ್ನೆಯಲ್ಲಿ ನಮ್ಮ ಪಕ್ಷ ರೈತರ ಪರವಾಗಿ ನಿಲ್ಲುತ್ತದೆ. ಅವರ ಜತೆ ನಿಂತು ಕಾನೂನು ಹೋರಾಟ ನಡೆಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಈ ಯೋಜನೆ ಕುಮಾರಸ್ವಾಮಿ ಅವರ ಕೂಸು ಎಂದು ಮುಖ್ಯಮಂತ್ರಿ ಸೇರಿದಂತೆ ಇನ್ನೂ ಕೆಲವರು ಹೇಳುತ್ತಿದ್ದಾರೆ. ನಾನು ಚಿಂತನೆ ಮಾಡಿದ್ದು 2006ರಲ್ಲಿ, ಈಗ ನಾವು ಇರುವುದು 2026. 20 ವರ್ಷಗಳಲ್ಲಿ ಎಷ್ಟು ಬದಲಾವಣೆಯಾಗಿದೆ, ಎಷ್ಟೊಂದು ಅಭಿವೃದ್ಧಿಯಾಗಿದೆ. ಇಷ್ಟು ವರ್ಷಗಳಲ್ಲಿ ಏನೆಲ್ಲಾ ಆಯಿತು ಎನ್ನುವುದನ್ನು ಈ ಸರ್ಕಾರ ಅರ್ಥಃ ಮಾಡಿಕೊಳ್ಳಬೇಕು. ಯಾವುದೇ ಯೋಜನೆ ಕೈಗೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆಯಬೇಕು. ಅದನ್ನು ಮಾಡದೇ ಈ ಸರ್ಕಾರ ಸಾರ್ವಕಾಧಿಕಾರಿ ಮನೋಭಾವದಿಂದ ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮೊದಲಿನಿಂದ ಕಾಂಗ್ರೆಸ್ ಸರಕಾರ ಇಂಥದೇ ದಂಧೆಯಲ್ಲಿ ನಿರತವಾಗಿದೆ. ಬೆಂಗಳೂರು ಸುತ್ತಮುತ್ತ ಅರ್ಕಾವತಿ ಬಡಾವಣೆಗೆ ಸುಮಾರು ಮೂರು ಸಾವಿರ ಎಕರೆ ಭೂಮಿಯನ್ನು ನೋಟಿಫೈ ಮಾಡಲಾಗಿತ್ತು. ಆಮೇಲೆ ಅದರಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ಕೈಬಿಡಲಾಯಿತು. ಇವೆಲ್ಲವೂ ಕಣ್ಣ ಮುಂದೆಯೇ ನಡೆದಿವೆ. ಅದರ ತನಿಖೆಗೆ ಕೆಂಪಣ್ಣ ಆಯೋಗ ರಚನೆ ಮಾಡಿದರು. ಆ ವರದಿ ಎಲ್ಲಿ ಕೊಳೆಯುತ್ತಿದೆಯೋ ಗೊತ್ತಿಲ್ಲ ಎಂದು ಅವರು ಹೇಳಿದರು.
ಪ್ರಧಾನಿಗ ಅವರು ಕೃಷಿ, ನೀರಾವರಿ ಭೂಮಿಯಲ್ಲಿ ಟೌನ್ ಶಿಪ್ ಮಾಡಿಲ್ಲ
ಜನರಿಂದ, ರೈತರಿಂದ ತೀವ್ರ ವಿರೋಧ ಬಂದ ನಂತರ ಈಗ ಪ್ರಧಾನಿ ನರೇಂದ್ರ ಮೋದಿಯವರೇ ಈ ಯೋಜನೆಯನ್ನು ಮೆಚ್ಚಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ, ನರೇಂದ್ರ ಮೋದಿ ಅವರು ಟೌನ್ ಶಿಪ್ ಗಳನ್ನು ಹಾಗೂ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದ್ದು ಎಲ್ಲಿ? ಭೂಕಂಪದಿಂದ ಸಂಪೂರ್ಣವಾಗಿ ನಾಶವಾಗಿದ್ದ ಪ್ರದೇಶದಲ್ಲಿ ಅವರು ಇಂಥ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಆದರೆ, ಬಿಡದಿಯಲ್ಲಿ ಬೇರೆ ಪರಿಸ್ಥಿತಿ ಇದೆ. ಇಲ್ಲಿ ತೋಟಗಳಿವೆ, ಹೈನುಗಾರಿಕೆ ನಡೆಯುವ ಭೂಮಿಯಿದೆ. ಈ ವಿಚಾರವನ್ನು ಮುಖ್ಯಮಂತ್ರಿಗಳು ಪ್ರಧಾನಿ ಹೇಳಿದ್ದಾರಾ ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಇಬ್ಬರೇ ಒನ್ ಟು ಒನ್ ಮಾತನಾಡಿದ್ದಾರೆ. ಅವರು ಏನು ಮಾತನಾಡಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಮುಖ್ಯಮಂತ್ರಿಗಳು ರಾಜ್ಯದ ರೈತರ ಹಿತ ಬಲಿ ಕೊಡುವುದಕ್ಕೆ ಪ್ರಧಾನಿಗಳ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ. ಅವರಲ್ಲಿ ಅಧಿಕಾರ ಇದೆ. ಏನು ಬೇಕಾದರೂ ಮಾಡುವ ಉದ್ಧಟತನ ವ್ಯಕ್ತಿ ಅವರು ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಟೌನ್ಶಿಪ್ ವಿಷಯದಲ್ಲಿ ರಾಜಕೀಯ ಮಾಡುವ ಉದ್ದೇಶ ನನಗೆ ಇಲ್ಲ. 2006ರಲ್ಲಿ ನಾನು ಐದು ಟೌನ್ಶಿಪ್ಗಳನ್ನು ಮಾಡಲು ಹೊರಟಾಗ ಇತ್ತೀಚಿನ ದಿನಗಳವರೆಗೂ ಕಾನೂನು ಮಂತ್ರಿ ಆಗಿದ್ದ ಹೆಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಸತ್ಯಶೋಧನಾ ಸಮಿತಿ ರಚನೆ ಮಾಡಿ ಐದೂ ಸ್ಥಳಗಳಲ್ಲಿ ಸತ್ಯಶೋಧನೆ ಮಾಡಿದ್ದರಲ್ಲಾ.. ಆ ಸತ್ಯಶೋಧನಾ ವರದಿ ಎಲ್ಲಿ ಹೋಯಿತು? ಅದನ್ನು ಜನರ ಮುಂದೆ ಇಡಿ. ಯಾವ ಉದ್ದೇಶಕ್ಕೆ ಅಂದು ಈ ಯೋಜನೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ವಿರೋಧ ಮಾಡಿದರು ಎಂಬುದನ್ನು ಸಾರ್ವಜನಿಕವಾಗಿ ಜನರ ಮುಂದೆ ಹೇಳಲಿ ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಎಲ್ಲಿ , ಹೇಗೆ ಹೋರಾಟ ಮಾಡಬೇಕೋ ಮಾಡುತ್ತೇವೆ. ರೈತರಿಗೆ ನ್ಯಾಯ ಕೊಡಿಸಲಿದ್ದೇವೆ. ರೈತರ ಪರ ನಿಲ್ಲುವುದು ಜನಪ್ರತಿನಿಧಿಗಳ ಕರ್ತವ್ಯ. ಆ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ರೈತರ ಭೂಮಿ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.


