ಸಚಿವ ಎಚ್.ಡಿ.ಕುಮಾರಸ್ವಾಮಿಯಿಂದ ಶಬರಿಮಲೆ ಯಾತ್ರೆ
ಸೋಮವಾರ ಬೆಳಿಗ್ಗೆಯೇ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸನ್ನಿಧಾನಕ್ಕೆ ಹೊರಟ ಕೇಂದ್ರ ಸಚಿವರು, ಸನ್ನಿಧಾನದಲ್ಲಿ ಪಡಿಪೂಜೆ ಮತ್ತು ಪುಷ್ಪಾಭಿಷೇಕ
ಶಬರಿಮಲೆ, ಜೂನ್ 15: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ.
ಬೆಳಗಿನ ಜಾವ ಕೊಚ್ಚಿನ್ ನಗರದ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸಚಿವರು, ನಂತರ ದೇಗುಲದಲ್ಲಿಯೇ ಇರುಮುಡಿ ಹೊತ್ತು ಶಬರಿಮಲೆಗೆ ಯಾತ್ರೆ ಹೊರಟರು.
ಮಧ್ಯಾಹ್ನದ ಹೊತ್ತಿಗೆ ಪಂಪಾ ನದಿ ತೀರವನ್ನು ಸೇರಿದ ಸಚಿವರು ಹಾಗೂ ಅವರೊಡನೆ ತೆರಳಿರುವ ಭಕ್ತರ ತಂಡವು, ತದನಂತರ ಪಂಪೆಯಲ್ಲಿ ಪುಣ್ಯ ಸ್ನಾನ ಮಾಡಿ ಶಬರಿಮಲೆಯತ್ತ ತೆರಳಿತು.
ಸಂಜೆ ಅಯ್ಯಪ್ಪ ಸನ್ನಿಧಿಯಲ್ಲಿ ಸಚಿವರು ಪಡಿಪೂಜೆಯಲ್ಲಿ ಪಾಲ್ಗೊಂಡರು ಹಾಗೂ ಅಯ್ಯಪ್ಪ ಸ್ವಾಮಿಗೆ ಪುಷ್ಪ ಅಭಿಷೇಕ ಸಲ್ಲಿಸಿದರು.
ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ನಂತರ ಶಬರಿಮಲೆಗೆ ಕೈಗೊಂಡ ಮೊದಲ ಯಾತ್ರೆ ಇದಾಗಿದೆ. ಇದಕ್ಕೂ ಮೊದಲು ಅವರು ಹಲವಾರು ಬಾರಿ ಅಯ್ಯಪ್ಪನ ಸನ್ನಿಧಿಗೆ ಯಾತ್ರೆ ಕೈಗೊಂಡಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಜಿ ಮಂತ್ರಿಗಳಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡರು, ಶಾಸಕರಾದ ಶರಣಗೌಡ ಕಂದಕೂರ, ಮಾಜಿ ಶಾಸಕರಾದ ಮಾಗಡಿ ಮಂಜುನಾಥ್, ಎಚ್.ಎಂ. ರಮೇಶ್ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರ ತಂಡದೊಂದಿಗೆ ಕೇಂದ್ರ ಸಚಿವರು ಯಾತ್ರೆ ಕೈಗೊಂಡಿದ್ದಾರೆ.


