ಮಡಿಕೇರಿ: ಕೊಡಗಿನ ಪತ್ರಿಕಾವಲಯದಲ್ಲಿ 'ಜಗ್ಗ' ಎಂದೇ ಪರಿಚಿತರಾಗಿರುವ ಹಿರಿಯ ಪತ್ರಕರ್ತ ಹಾಗೂ ಟಿವಿ9 ಡಿಜಿಟಲ್ ವಿಭಾಗದ ಡೆಪ್ಯೂಟಿ ಎಡಿಟರ್ ಜಗದೀಶ್ ಬೆಳ್ಳಿಯಪ್ಪ ಅವರು ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವಿನ ಅಗತ್ಯವಿದೆ.
ಮೂರು ದಶಕಗಳ ವೃತ್ತಿಜೀವನದಲ್ಲಿ ಶಕ್ತಿ, ಟಿವಿ9 ಮತ್ತು ಇತರೆ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅವರು, ಕೊಡಗಿನ ಹಲವು ಜನಪರ ಸಮಸ್ಯೆಗಳಿಗೆ ತಮ್ಮ ವರದಿಗಳ ಮೂಲಕ ಧ್ವನಿಯಾಗಿದ್ದಾರೆ. ವಿಶೇಷ ವರದಿಗಾರಿಕೆಯಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯ, ಅಪರಾಧ ಮತ್ತು ಮಾನವೀಯ ವಿಷಯಗಳ ಕುರಿತ ಆಳವಾದ ವರದಿಗಳ ಮೂಲಕ ಗಮನ ಸೆಳೆದಿದ್ದಾರೆ. ಕೊಡಗಿನ ಹಲವು ವಿಶಿಷ್ಟ ಆಚರಣೆಗಳು, ಸಂಸ್ಕೃತಿ ಹಾಗೂ ಜನಜೀವನವನ್ನು ರಾಜ್ಯದ ವೀಕ್ಷಕರಿಗೆ ಪರಿಚಯಿಸುವಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ.
ವೃತ್ತಿಯಲ್ಲಿ ಯಾವುದೇ ಆಮಿಷಗಳಿಗೆ ಬಲಿಯಾಗದೆ, ತಾವು ನಂಬಿದ ತತ್ವ ಮತ್ತು ವೃತ್ತಿನಿಷ್ಠೆಯನ್ನು ಕಾಪಾಡಿಕೊಂಡು ಬಂದ ಜಗದೀಶ್, ಸಹೋದ್ಯೋಗಿಗಳೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರ ಸಹೋದ್ಯೋಗಿಗಳು ನೆನಪಿಸಿಕೊಳ್ಳುವಂತೆ, ಸುದ್ದಿಯ ಹಿಂದೆ ಓಡುವ ಉತ್ಸಾಹ ಹಾಗೂ ಕಠಿಣ ಪರಿಶ್ರಮ ಅವರ ವೃತ್ತಿಜೀವನದ ಪ್ರಮುಖ ಗುಣಗಳಾಗಿವೆ.
ಕಳೆದ ವರ್ಷ ಮಗಳ ವಿವಾಹವನ್ನು ಸಂಭ್ರಮದಿಂದ ನೆರವೇರಿಸಿದ್ದ ಜಗದೀಶ್ ಅವರಿಗೆ, ಈಚೆಗೆ ಗಂಭೀರ ಕಾಯಿಲೆ ಕಾಣಿಸಿಕೊಂಡಿತ್ತು. ಸದ್ಯ ರೂ.35 ಲಕ್ಷ ವೆಚ್ಚದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಾಯಿಲೆ ಮರುಕಳಿಸಿರುವ ಹಿನ್ನೆಲೆ, ಮುಂದಿನ ಚಿಕಿತ್ಸೆಗೆ ಕನಿಷ್ಠ ರೂ.15 ಲಕ್ಷ ಅಗತ್ಯವಿದೆ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.
ತಮ್ಮ ವೃತ್ತಿಜೀವನದಲ್ಲಿ ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದ ಜಗ್ಗನ ಚಿಕಿತ್ಸೆಗೆ, ಇದೀಗ ಸಮಾಜದ ನೆರವು ಅಗತ್ಯವಾಗಿದೆ. ಗೆಳೆಯರು, ಸಹೋದ್ಯೋಗಿಗಳು ಮತ್ತು ಸಾರ್ವಜನಿಕರು ತಮ್ಮಿಂದ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ನೆರವು ನೀಡಲು:
Axis Bank | A/c: 009010101338636
Jagadish P B | IFSC: UTIB0000009
GPay/PhonePe: 9060137282 / 8660529389