ಪುತ್ತೂರು: ಬಂಟ್ವಾಳ ತಾಲೂಕಿನಲ್ಲಿರುವ ವಿಟ್ಲ ಪಟ್ಟಣ ಪಂಚಾಯತಿಯನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರಕ್ಕೆ (Puttur Town Planning Authority) ಸೇರಿಸಲು ಉದ್ದೇಶಿಸಲಾಗಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ (ಕನ್ವರ್ಶನ್) ಮಾಡಿಸಲು ಅಸಾಧ್ಯವಾಗಿದೆ. ಸರ್ಕಾರದ ಯೋಜನೆ ಅನುಮೋದನೆಯಾಗುವರೆಗೂ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ (Ashok Rai), ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮ್ಯಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸಚಿವರನ್ನು ಭೇಟಿಯಾಗಿ, ಶಾಸಕರು ಮಾತುಕತೆ ನಡೆಸಿದರು. ತಮ್ಮ ಮನವಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರಕ್ಕೆ ಸೇರಿಸಲಾಗುತ್ತಿದೆ. ಹೀಗಾಗಿ ಈ ಯೋಜನೆಗೆ ಅನುಮೋದನೆ ಆಗುವವರೆಗೆ ಸದರಿ ಪ್ರದೇಶವನ್ನು ಕೃಷಿ ವಲಯ ಎಂದು ಪರಿಗಣಿಸಿ, ಯಾವುದೇ ಜಮೀನನ್ನು ಭೂಪರಿವರ್ತನೆ ಮಾಡದಂತೆ ಸಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಈ ಯೋಜನೆ ಅನುಮೋದನೆ ಆಗಲು ಸಮಾಯಾವಕಾಶವಿದ್ದು, ಪ್ರಸ್ತುತ ಹಲವಾರು ಸಾರ್ವಜಕರು ಮನೆ ನಿರ್ಮಾಣ ಮಾಡಲು & ಇತರೆ ಉದ್ದೇಶಕ್ಕೆ ಭೂಪರಿರ್ವತನೆ ಮಾಡಲು ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವು ಇತ್ಯರ್ಥವಾಗದೆ ಬಾಕಿಯಿದ್ದು, ಯೋಜನೆಗೆ ಒಪ್ಪಿಗೆ ದೊರೆಯುವ ತನಕ 'ವಿಟ್ಲ ಪಟ್ಟಣ ಪಂಚಾಯಿತಿ' ವ್ಯಾಪ್ತಿಯಲ್ಲಿ ಭೂಪರಿವರ್ತನೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಸಚಿವರೊಂದಿಗೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ ಅವರನ್ನು ಭೇಟಿಯಾಗಿಯೂ ಶಾಸಕರು ಚರ್ಚಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಶೋಕ್ ರೈ ಅವರು, 'ಸರ್ಕಾರದ ಹೊಸ ಆದೇಶ ಹೊರಡಿಸುವವರೆಗೂ, ಭೂಪರಿವರ್ತನೆಗೆ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಇಲಾಖೆಗೆ ಆದೇಶ ಮಾಡಬೇಕೆಂದು ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ' ಎಂದು ಹೇಳಿದ್ದಾರೆ.