ವಿದ್ಯಾರ್ಥಿಗಳು ಶಿಸ್ತಿನ ಮೈಗೂಡಿಸುವಿಕೆಯೊಂದಿಗೆ ದೇಶಕ್ಕೆ ಮಾದರಿಯಾಗಬೇಕು: ಸುಬ್ರಮಣ್ಯ ನಟ್ಟೋಜ
Ambika PU College: ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷದ ಪೋಷಕರ ಸಭೆ ನಡೆದಿದೆ. ವಿದ್ಯಾರ್ಥಿಗಳು ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಸುಬ್ರಮಣ್ಯ ನಟ್ಟೋಜ ಅವರು ಹೇಳಿದ್ದಾರೆ.
ಪುತ್ತೂರು: ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ (Ambika PU College) ಜು.18 ಶನಿವಾರದಂದು ಶೈಕ್ಷಣಿಕ ವರ್ಷದ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯ ಅಧ್ಯಕ್ಷತೆ ವಹಿಸಿ, ನಟ್ಟೋಜ ಫೌಂಡೇಶನ್ ಟ್ರಸ್ಟ್ (Nattoja Foundation Trust) ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಮೌಲ್ಯಗಳ ಅಗತ್ಯತೆಯನ್ನು ಒತ್ತಿ ಹೇಳಿದರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಸಂಯಮ ಅತಿ ಮುಖ್ಯವಾದ ಅಂಶಗಳಾಗಿವೆ. ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಗುರುತಿಸುವಂತಾಗಬೇಕು ಹಾಗೂ ಸಮಾಜಕ್ಕೆ ತನ್ನದೇ ಆದ ವಿಶೇಷ ರೀತಿಯಲ್ಲಿ ಕೊಡುಗೆ ನೀಡುವುದರ ಮೂಲಕ ಇಡೀ ದೇಶಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ಲಭಿಸಬೇಕು ಎಂದು ಹೇಳಿದರು.
ಶಿಕ್ಷಣ ಎಂದರೆ ಕೇವಲ ಕಲಿಕೆ ಮಾತ್ರವಲ್ಲ. ಹಾಗಾಗಿಯೇ ಅಂಬಿಕಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಒಳಿತಿಗಾಗಿ ಯೋಗವನ್ನು ಕೂಡ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿಗಳು ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡುವುದರ ಮೂಲಕ ತಮ್ಮಲ್ಲಿರುವ ಆತ್ಮವಿಶ್ವಾಸಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಮತ್ತು ಮಾನಸಿಕವಾದ ಒತ್ತಡವನ್ನು ನಿವಾರಿಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಸಂಘದ (ಪಿಟಿಎ) ಅಧ್ಯಕ್ಷ ಅವಿನಾಶ್ ಕೊಡೆಂಕಿರಿ ಮಾತನಾಡಿ, ಪದವಿಪೂರ್ವ ಶಿಕ್ಷಣದ ಹಂತವೆಂದರೆ ಅದು ವಿದ್ಯಾರ್ಥಿಯ ಜೀವನದ ಅತಿ ಮುಖ್ಯವಾದ ಸಮಯ ಮಾತ್ರವಲ್ಲದೆ, ಅದು ಅವರ ತಾರುಣ್ಯದ ಸಮಯವಾಗಿದೆ. ಈ ವಯಸ್ಸು ವ್ಯಕ್ತಿಯು ಬದುಕಿನಲ್ಲಿ ತಳಮಳಗೊಳ್ಳುವ ಹಾಗೂ ಭಾವನಾತ್ಮಕ ಗೊಂದಲಗಳನ್ನು ಉಂಟು ಮಾಡುವ ಸಮಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪೋಷಕರು ಹಾಗೆ ಉಪನ್ಯಾಸಕರು ಸರಿಯಾದ ಮಾರ್ಗದರ್ಶನವನ್ನು ನೀಡಿದಲ್ಲಿ ಅವರು ಉತ್ತಮ ನಾಗರಿಕರಾಗಿ ಬೆಳಗಲು ಸಾಧ್ಯ. ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಜೊತೆ ಸಂವಾದ, ಸಂವಹನ ಮಾಡುವುದರ ಮೂಲಕ ಕಲಿಕೆಯಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಅವರು ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ವಿನುತಾ ಸಾಲೆ ಹಾಗೂ ವಿದ್ಯಾಲಯದ ಎಲ್ಲಾ ಉಪನ್ಯಾಸಕರು ಸಭೆಯಲ್ಲಿ ಹಾಜರಿದ್ದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಅವರು, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.