ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹುಟ್ಟುಹಬ್ಬ: ನಿರಾಶ್ರಿತರಿಗೆ ಅನ್ನದಾನ
ಕಾವೇರಿ ಮತ್ತು ಮಹಾದಾಯಿ ನೀರಿನ ಸಮಸ್ಯೆಗಳ ಹೋರಾಟದಲ್ಲಿ ಅವರು ತೋರಿದ ಬದ್ಧತೆ ಹಾಗೂ ರೈತರ ಮೇಲಿರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮತ್ತು ಯುವಕರಿಗೆ ದೊಡ್ಡ ಮಾರ್ಗದರ್ಶನವಾಗಿದೆ
ಮಂಗಳೂರು, ಮೇ 18: ಮಾಜಿ ಪ್ರಧಾನಿ, ರಾಜಕೀಯ ಭೀಷ್ಮ, ಹಿರಿಯ ಮುತ್ಸದ್ದಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬವನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ವತಿಯಿಂದ ನಗರದಲ್ಲಿ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ನಗರದ ನಿರಾಶ್ರಿತರಿಗೆ ಊಟ ಹಂಚುವ ಮೂಲಕ ಸರಳ ಹಾಗೂ ಜನಪರವಾದ ರೀತಿಯಲ್ಲಿ ಜನ್ಮದಿನವನ್ನು ಆಚರಿಸಲಾಯಿತು.
ಅಕ್ಷಿತ್ ಸುವರ್ಣ ಮಾತನಾಡಿ, ‘ಈ ದೇಶದ 11ನೇ ಪ್ರಧಾನಿಯಾಗಿ ಎಚ್.ಡಿ. ದೇವೇಗೌಡರು ತಮ್ಮ ಅತ್ಯಲ್ಪ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಎಂದಿಗೂ ಸ್ಮರಣೀಯ. ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸಿದ್ದು, ರೈತರಿಗೆ ರಸಗೊಬ್ಬರ ಸಬ್ಸಿಡಿ ನೀಡಿದ್ದು ಅವರ ಸಾಧನೆಗಳಾಗಿವೆ. ಕಾವೇರಿ ಮತ್ತು ಮಹಾದಾಯಿ ನೀರಿನ ಸಮಸ್ಯೆಗಳ ಹೋರಾಟದಲ್ಲಿ ಅವರು ತೋರಿದ ಬದ್ಧತೆ ಹಾಗೂ ರೈತರ ಮೇಲಿರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಮತ್ತು ಯುವಕರಿಗೆ ದೊಡ್ಡ ಮಾರ್ಗದರ್ಶನವಾಗಿದೆ. ಭಗವಂತ ಅವರಿಗೆ ಇನ್ನಷ್ಟು ಆಯಸ್ಸು, ಆರೋಗ್ಯ ನೀಡಿ ಕಾಪಾಡಲಿ’ ಎಂದು ಪ್ರಾರ್ಥಿಸಿದರು.
ಜೆಡಿಎಸ್ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ ದೇವೇಗೌಡ ಅವರಿಗೆ ಶುಭ ಹಾರೈಸಿದರು.
ಮುಖಂಡರಾದ ರತ್ನಾಕರ ಸುವರ್ಣ (ರಾಜ್ಯಾಧ್ಯಕ್ಷರು, ಮೀನುಗಾರ ಘಟಕ), ರತೀಶ್ ಕರ್ಕೇರ (ಅಧ್ಯಕ್ಷರು, ಯುವ ಜೆಡಿಎಸ್ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ), ಹಿತೇಶ್ ರೈ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಸತ್ತಾರ್ ಬಂದರು (ಅಧ್ಯಕ್ಷರು, ಮಂಗಳೂರು ದಕ್ಷಿಣ ಕ್ಷೇತ್ರ), ವಿನ್ಸೆಂಟ್ ಸುರತ್ಕಲ್, ಪುಷ್ಪರಾಜ್, ಭಾರತಿ, ಕನಕದಾಸ ಕುಳೂರು, ಚೂಡಮಣಿ, ಸುಶಾಂತ್ ಪೂಜಾರಿ, ವಿಖ್ಯಾತ್, ಪ್ರೀತೇಶ್, ರಕ್ಷಿತ್, ವಿನಿತ್ ಪೂಜಾರಿ, ಆದರ್ಶ ಪೂಜಾರಿ ಇತರರು ಇದ್ದರು.


