ಜವಾಬ್ದಾರಿಯುತ ಸರ್ಕಾರವಾಗಿ ಎಸ್ಐಆರ್ ಬಗ್ಗೆ ಜನರಲ್ಲಿ ಜಾಗೃತಿ: ಡಿ.ಕೆ. ಶಿವಕುಮಾರ್
ನಾಳೆ ಸಮಸ್ಯೆಯಾದರೆ ಜನ ಪ್ರಶ್ನೆ ಮಾಡುವುದು ನಮ್ಮನ್ನೇ, ನಮ್ಮಿಂದ ಹಾಗೂ ಸರ್ಕಾರದಿಂದ ಏನೂ ತೊಂದರೆಯಾಗಬಾರದು, ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು ಎಂಬುದು ನನ್ನ ಆಶಯ. ಚುನಾವಣೆ ಗೆಲ್ಲುವುದು, ಬಿಡುವುದು ಬೇರೆ ವಿಚಾರ. ಮತದಾನ ಕಳೆದುಕೊಳ್ಳಬೇಡಿ ಎಂದು ನಾವು ಹೇಳಬೇಕು ಎಂದ ಡಿಸಿಎಂ
ಬೆಂಗಳೂರು, ಮೇ 24: "ಜವಾಬ್ದಾರಿಯುತ ಸರ್ಕಾರವಾಗಿ ನಾವು ಜನರಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಬಗ್ಗೆ ಜಾಗೃತಿ ಮೂಡಿಸಬೇಕು. ನಾವು ಆ ಕೆಲಸ ಮಾಡುತ್ತೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಸದಾಶಿವನಗರ ನಿವಾಸ ಹಾಗೂ ಜೆಡಬ್ಲ್ಯೂ ಮ್ಯಾರಿಯೆಟ್ ಹೊಟೇಲ್ ಬಳಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
"ಕರ್ನಾಟಕ ರಾಜ್ಯದ ಎಲ್ಲಾ ಜನರ ಹಕ್ಕು ಉಳಿಸಲು ಇಂದು ಪಕ್ಷದ ಮುಖಂಡರ ಸಭೆ ಕರೆಯಲಾಗಿದೆ. ಚುನಾವಣಾ ಆಯೋಗ ನೀಡುವ ಅರ್ಜಿ ತುಂಬಿಸಿ ದಾಖಲೆ ಸಮೇತ ವಾಪಸ್ ನೀಡಿದವರ ಮತ ಮಾತ್ರ ಉಳಿಯುತ್ತದೆ, ಅರ್ಜಿ ವಾಪಸ್ ನೀಡದವರ ಮತದಾನದ ಹಕ್ಕು ನಷ್ಟವಾಗಲಿದೆ. ಈ ಬಗ್ಗೆ ಬಿಎಲ್ ಎಗಳ ಮೂಲಕ ನಾವು ಇವುಗಳನ್ನು ಖಾತರಿಪಡಿಸಬೇಕಾಗಿದೆ" ಎಂದರು.
"ಎಸ್ ಐಆರ್ ನಿಂದ ಈ ದೇಶದಲ್ಲಿ ಸಾಕಷ್ಟು ಅನಾಹುತಗಳು ನಡೆಯುತ್ತಿವೆ. ಅದಕ್ಕೆ ಇದರ ಬಗ್ಗೆ ನಾವು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಬಡ, ಸಾಮಾನ್ಯರಿಗೆ ಎಸ್ ಐಆರ್ ಬಗ್ಗೆ ಪರಿಚಯ ಮಾಡಿಕೊಡಬೇಕಿದೆ. ಒಂದೊಂದು ರಾಜ್ಯದಲ್ಲಿ 50, 60 ಹಾಗೂ 90 ಲಕ್ಷದವರೆಗೆ ಮತಗಳನ್ನು ತೆಗೆದುಹಾಕಲಾಗುತ್ತಿದೆ. ಕರ್ನಾಟಕದಲ್ಲೂ ಎಸ್ ಐಆರ್ ಪ್ರಾರಂಭವಾಗುತ್ತಿದೆ" ಎಂದರು.
"ಮತದಾನದ ಹಕ್ಕನ್ನು ಕಳೆದುಕೊಂಡರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಗೃಹಲಕ್ಷ್ಮೀ ಯೋಜನೆ ಹಣ, ಪಿಂಚಣಿ, ಮನೆ, ಜಮೀನು ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ದೃಷ್ಟಿಯಿಂದ ಸರ್ಕಾರ ಜನರಿಗೆ ಬೇಕಾದ ದಾಖಲೆಗಳನ್ನು ಒದಗಿಸಿಕೊಡಬೇಕು. ಇದು ಜವಾಬ್ದಾರಿಯುತ ಸರ್ಕಾರದ ಕೆಲಸ. ಕೇರಳದಲ್ಲಿ ಇದೇ ರೀತಿ ಮಾಡಲಾಗಿದೆ" ಎಂದು ತಿಳಿಸಿದರು.
ನಾಳೆ ಸಮಸ್ಯೆಯಾದರೆ ಜನ ಪ್ರಶ್ನೆ ಮಾಡುವುದು ನಮ್ಮನ್ನೇ
"ಮತದಾರರು ಅರ್ಜಿ ಹಾಕಿಕೊಳ್ಳಬೇಕು. ಇಲ್ಲದಿದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಕಾಂಗ್ರೆಸ್, ಬಿಜೆಪಿ, ದಳ ಸೇರಿದಂತೆ ಎಲ್ಲಾ ಪಕ್ಷಗಳು ಬಿಎಲ್ ಎ ಗಳಿಗೆ ತರಬೇತಿ ನೀಡುತ್ತಿವೆ. ನಮ್ಮಿಂದ ಹಾಗೂ ಸರ್ಕಾರದಿಂದ ಏನೂ ತೊಂದರೆಯಾಗಬಾರದು ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು ಎಂಬುದು ನನ್ನ ಆಶಯ. ಚುನಾವಣೆ ಗೆಲ್ಲುವುದು, ಬಿಡುವುದು ಬೇರೆ ವಿಚಾರ. ಮತದಾನ ಕಳೆದುಕೊಳ್ಳಬೇಡಿ ಎಂದು ನಾವುಗಳು ಹೇಳಬೇಕು" ಎಂದರು.
"ಬಡವರ ಉಪಯೋಗಕ್ಕೆ ಜನ ಕಲ್ಯಾಣ ಯೋಜನೆಗಳನ್ನು ನೀಡಲಾಗುತ್ತಿದೆ. ಮತನಾದನದ ಹಕ್ಕು ಇಲ್ಲ ಎಂದು ಯೋಜನಾ ಸೌಲಭ್ಯಗಳನ್ನು ನಿರಾಕರಿಸಿದರೆ ಆನಂತರ ಜನರು ನಿಮ್ಮಿಂದಲೇ ಸೌಲಭ್ಯಗಳು ಇಲ್ಲ ಎನ್ನುತ್ತಾರೆ. ಬಿಜೆಪಿಯವರೇ ಎಸ್ ಐಆರ್ ಮಾಡಿರಬಹುದು ಆದರೆ ಜನ ನಮ್ಮನ್ನು ಪ್ರಶ್ನೆ ಮಾಡುತ್ತಾರೆ" ಎಂದರು.
ಎಸ್ ಐಆರ್ ಬಗ್ಗೆ ಮನವರಿಕೆ ಮಾಡಬೇಕು
"ಹಳ್ಳಿಜನಕ್ಕೆ ಎಸ್ ಐಆರ್ ಬಗ್ಗೆ ಏನು ತಿಳಿದಿರುತ್ತದೆ. ನಾವುಗಳು ಇದನ್ನು ಮನವರಿಕೆ ಮಾಡಬೇಕು. ಲಕ್ಷಾಂತರ ಜನ ವಲಸೆ ಕಾರ್ಮಿಕರು ಸೇರಿದಂತೆ ಜೀವನೋಪಯಕ್ಕೆ ಗೋವಾ ಸೇರಿದಂತೆ ಅನೇಕ ಕಡೆಗೆ ವಲಸೆ ಹೋಗಿರುತ್ತಾರೆ. ಈ ವೇಳೆ ಮನೆಗೆ ಬಂದಾಗ ಯಾರು ಇಲ್ಲದಿದ್ದರೆ ತೊಂದರೆಯಾಗುತ್ತದೆ. ಎಸ್ ಐಆರ್ ವೇಳೆ ಎಲಿಮಿನೇಷನ್ ಅರ್ಜಿಗೆ ಸಹಿಹಾಕಿಸಿಕೊಳ್ಳುತ್ತಾರೆ. ಮೂರು ಬಾರಿ ಅರ್ಜಿಗೆ ಸಹಿ ಮಾಡಬೇಕಾದ ಸ್ಥಿತಿಯಿದೆ. ಇದು ಆಗದೇ ಇದ್ದರೆ ಪಟ್ಟಿಯಲ್ಲಿ ಹೆಸರಿಲ್ಲದಂತಾಗುತ್ತದೆ"ಎಂದರು.
"ಸ್ವತಃ ನಾನೇ ಎಲಿಮಿನೇಷನ್ ಅರ್ಜಿಗೆ ಸಹಿ ಹಾಕದೇ ಇದ್ದರೇ ನನ್ನ ಮತವೇ ನನಗೆ ಇರುವುದಿಲ್ಲ. ಮಹಾರಾಜನಾದರೂ ಮತ ಇಲ್ಲವಾಗುತ್ತದೆ. ಮುಂದಿನ ಚುನಾವಣೆಗೆ ಮತ ಹಾಕಿ ಎಂದು ಕಳಿಸಿಬಿಡುತ್ತಾರೆ. ಅಮರ್ಥ್ಯ ಸೇನ್ ಅವರದ್ದೇ ಮತವಿಲ್ಲದಾಗಿದೆ. ಈ ರೀತಿ ಆಗುವುದು ಬೇಡ. ಅವರವರ ಮತವನ್ನು ಉಳಿಸಿಕೊಳ್ಳಬೇಕು" ಎಂದರು.
ಪಕ್ಷವಿದ್ದರೆ ಸ್ಥಾನಮಾನ
ಸಂಪುಟ ವಿಸ್ತರಣೆ ಬಗೆಗಿನ ಗೊಂದಲ ಬಗೆಹರಿಯಲಿದೆಯೇ ಎಂದು ಕೇಳಿದಾಗ, "ಯಾವ ಗೊಂದಲವೂ ಇಲ್ಲ ಏನಿಲ್ಲಾ. ನೀನು ಇದ್ದರೆ ಮಾತ್ರ ನಿನ್ನ ಪಕ್ಷ. ಮೊದಲು ನೀನು ಹಾಗೂ ಪಕ್ಷ ಇರಬೇಕು ಆನಂತರ ಮಿಕ್ಕಿದ್ದೆಲ್ಲಾ ಸ್ಥಾನಮಾನ" ಎಂದು ಹೇಳಿದರು.
ಭಟ್ಕಳದಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿ 8 ಮಂದಿ ಜಲಸಮಾಧಿಯಾಗಿರುವ ಬಗ್ಗೆ ಕೇಳಿದಾಗ, "ಈ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸಭೆ ಆರಂಭವಾದ ಬಳಿಕ ಹೊರಡಲಿದ್ದಾರೆ. ಈ ಪ್ರಕರಣದಲ್ಲಿ ಏನು ಕ್ರಮಗಳನ್ನು ಕೈಗೊಳ್ಳಬೇಕೋ ಸರ್ಕಾರ ಅದನ್ನು ಮಾಡಲಿದೆ. ನಾಪಟ್ಟೆಯಗಿರುವವರ ಪತ್ತೆ ಕಾರ್ಯಚರಣೆ ಬಗ್ಗೆ ಜಿಲ್ಲಾಡಳಿತ ಜೊತೆ ಮಾತುಕತೆ ನಡೆಸಲಾಗಿದೆ" ಎಂದರು.
ಪರಿಹಾರ ಘೋಷಣೆ ಬಗ್ಗೆ ಕೇಳಿದಾಗ, "ಈಗಲೇ ಪರಿಹಾರ ಘೋಷಣೆಯಲ್ಲ, ಮೊದಲು ಜನರನ್ನು ಬದುಕಿಸುವತ್ತ ಗಮನಹರಿಸಬೇಕು" ಎಂದರು.


