ವಿಜಯೇಂದ್ರ ಮೆಟ್ರೋ ಪ್ರಯಾಣ-ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ
ವಿಜಯೇಂದ್ರ ಮೆಟ್ರೋ ಪ್ರಯಾಣ ಮಾಡಲು ಕಾರಣರಾದವರು ಯಾರು ಎಂಬುದನ್ನು ಬಿಜೆಪಿ ದೇಶಕ್ಕೆ ತಿಳಿಸಬೇಕು ಎಂದ ಪ್ರಿಯಾಂಕ್ ಖರ್ಗೆ
ಕಲಬುರ್ಗಿ, ಮೇ 18: ವಿಜಯೇಂದ್ರ ಮೆಟ್ರೋ ಹತ್ತಿರುವ ಬಗ್ಗೆ ಮಾದ್ಯಮ ಗಳು ಪದೇ ಪದೇ ಸುದ್ದಿ ಬಿತ್ತರಿಸುತ್ತಿವೆ. ಆದರೆ,ಈ ಪರಿಸ್ಥಿತಿಗೆ ಯಾರು ಕಾರಣ ಎಂದು ಯಾಕೆ ಕೇಳುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಮಾಡಬೂಳ ಗ್ರಾಮದ ಬಳಿ ನಿರ್ಮಾಣವಾಗಿರುವ ನೂತನ ಮೃಗಾಲಯ ಉದ್ಘಾಟನೆ ನೆರವೇರಿಸಿದ ನಂತರದ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
ಮೋದಿ ವಿದೇಶದಿಂದ ತಂದ ಪ್ರಾಣಿಗಳು ಸತ್ತು ಹೋದವು. ಈಗ ನಾವು ತರುವ ಪ್ರಾಣಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಸಂರಕ್ಷಿಸಲಾಗುವುದು ಎಂದು ಪ್ರಿಯಾಂಕ್ ಹೇಳಿದರು.
ದೇಶ ಕಷ್ಟದ ಸ್ಥಿತಿಯಲ್ಲಿದ್ದಾಗ ಮೋದಿ ವಿದೇಶಕ್ಕೆ ಹೋಗುತ್ತಾರೆ. ಆರ್ಥಿಕಸ್ಥಿತಿಗತಿ, ಪೆಟ್ರೊಲಿಯಂ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲೇ ಹೇಳಬೇಕಿತ್ತು ನೆದರ್ ಲ್ಯಾಂಡ್ಸ್ ಗೆ ಯಾಕೆ ಹೋಗಬೇಕಿತ್ತು ಎಂದು ಖರ್ಗೆ ಕುಟುಕಿದರು.
ಬೆಲೆ ಏರಿಕೆ ವಿಷಯ ಮರೆಮಾಚಲು ಮೋದಿ ಚಿನ್ನ ಖರೀದಿ ಮಾಡಬೇಡಿ ಎಂದು ಜನರಿಗೆ ಕರೆ ಕೊಡುತ್ತಾರೆ. ನೀಟ್ ಅಕ್ರಮ ಬಗ್ಗೆ ಮೋದಿ ಯಾಕೆ ಮಾತನಾಡುವುದಿಲ್ಲ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ. ಇದಕ್ಕೆಯಾರು ಕಾರಣ? ಸಚಿವ ಧರ್ಮೆಂದ್ರ ಪ್ರಧಾನ್ ಅವರನ್ನ ಇನ್ನೂ ಸಚಿವರಾಗಿ ಮುಂದುವರೆಸಿದ್ದಾರೆ ಯಾಕೆ? ಎಂದು ಸಮಾರಂಭದಲ್ಲಿ ಹಾಜರಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.


