R.Ashoka: ನಿಷ್ಪಕ್ಷಪಾತ ತನಿಖೆ ನಡೆಯಲಿ: ಆರ್.ಅಶೋಕ
R.Ashoka: ಚಾಮರಾಜನಗರದ ಕಾಡಿನಲ್ಲಿ ಸ್ಥಳೀಯರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದಾರೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದರು.
ಬೆಂಗಳೂರು: ಚಾಮರಾಜನಗರದ ಕಾಡಿನಲ್ಲಿ ಸ್ಥಳೀಯರನ್ನು ಅರಣ್ಯ ಇಲಾಖೆ ಸಿಬ್ಬಂದಿ ಎನ್ಕೌಂಟರ್ ಮಾಡಿದ್ದಾರೆ. ಇದು ಸರ್ಕಾರವೇ ಮಾಡಿದ ಕೊಲೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ (R.Ashoka) ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಘಟನೆಯಲ್ಲಿ ಗಾಯಗೊಂಡ ನಾಲ್ಕನೇ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಿಢೀರನೆ ಆತ ಮಾಯವಾಗಿದ್ದಾನೆ. ಸರ್ಕಾರದ ನೀಡಿದ ಸ್ಪಷ್ಟೀಕರಣದಲ್ಲಿ ಈ ವ್ಯಕ್ತಿಯ ಹೇಳಿಕೆಯನ್ನು ಉಲ್ಲೇಖಿಸಿಲ್ಲ. ಮೃತರಾದ ಮೂವರು ವೀರಪ್ಪನ್ನಂತೆ ಕಾಡುಗಳ್ಳರಾಗಿದ್ದರೆ, ಅವರ ಪರವಾಗಿ ಅಷ್ಟೊಂದು ರೈತರು ಪ್ರತಿಭಟನೆ ಮಾಡುತ್ತಿರಲಿಲ್ಲ. ಮೃತರು ಅರಣ್ಯ ಅಪರಾಧ ಪ್ರಕರಣಗಳಲ್ಲಿ ಈ ಹಿಂದೆ ಭಾಗಿಯಾಗಿಲ್ಲ ಎಂದು ಸರ್ಕಾರವೇ ಹೇಳಿದೆ. ಅಂದಮೇಲೆ ಅವರನ್ನು ಏಕೆ ಎನ್ಕೌಂಟರ್ ಮಾಡಲಾಗಿದೆ? ಅಪರಾಧಗಳ ಇತಿಹಾಸವೇ ಇದ್ದಿದ್ದರೆ ರೌಡಿಶೀಟರ್ನಲ್ಲಿ ಅವರ ಹೆಸರು ಇರಬೇಕಿತ್ತು ಎಂದು ಹೇಳಿದರು.
ಅರಣ್ಯ ಸಿಬ್ಬಂದಿಗೆ ಆತ್ಮರಕ್ಷಣೆಗೆ ಗುಂಡು ಹಾರಿಸುವ ಅಧಿಕಾರವಿದೆ. ಹಾಗೆಯೇ ಜನರಿಗೂ ತಮ್ಮ ಪ್ರಾಣ ರಕ್ಷಿಸಿಕೊಳ್ಳುವ ಅಧಿಕಾರವಿದೆ. ಸಮೀಪ ಇರುವಾಗ ಕಾಲಿಗೆ ಗುಂಡು ಹೊಡೆಯಬಹುದಿತ್ತು. ಅದನ್ನು ಬಿಟ್ಟು ಎದೆಗೆ, ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಕಳ್ಳರಿದ್ದಾರೆ ಎಂಬ ಮಾಹಿತಿ ಗೊತ್ತಾದಾಗ, ಕೇವಲ ಮೂವರು ಸಿಬ್ಬಂದಿ ಏಕೆ ಹೋದರು? ಸಾಮಾನ್ಯವಾಗಿ ಅರಣ್ಯ ಇಲಾಖೆಯಲ್ಲಿ ಹಲವಾರು ಸಿಬ್ಬಂದಿ ಇರುತ್ತಾರೆ. ನೂರಾರು ಸಿಬ್ಬಂದಿ ಇರುವಾಗ, ಅವರನ್ನು ಸೆರೆ ಹಿಡಿಯಬಹುದಿತ್ತು. ಮೂವರನ್ನು ಸಾಯಿಸುವ ಅಗತ್ಯವೇನಿತ್ತು? ಒಬ್ಬನಿಗೆ ಗುಂಡು ಹಾರಿಸಿದ್ದರೆ ಉಳಿದವರು ಓಡಿ ಹೋಗುತ್ತಿದ್ದರು. ಅದನ್ನು ಮಾಡದೆಯೇ ಮೂವರನ್ನು ಸಾಯಿಸಿದ್ದಾರೆ ಎಂದರು.
ಅರಣ್ಯ ಬಳಿ ವಾಸಿಸುವ ಜನರು ಸೌದೆ ತರಲು, ದನ ಮೇಯಿಸಲು ಕಾಡೊಳಗೆ ಹೋಗುವುದು ಸಹಜ. ಅವರು ಕಾಡನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ಈ ರೀತಿ ಹೆದರಿಸಿದರೆ ಯಾರೂ ಕಾಡಿನೊಳಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಸಚಿವ ನಾಗೇಂದ್ರ ವಜಾಕ್ಕೆ ಒತ್ತಾಯ:
ಸಚಿವ ಬಿ.ನಾಗೇಂದ್ರ ರಾಜೀನಾಮೆ ಕುರಿತು ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜೀನಾಮೆ ಪಡೆಯಲಾಗಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ಲೂಟಿಯಾಗಿರುವುದು ಸಾಬೀತಾಗಿದೆ. ಈಗ ಮತ್ತೆ ಸಂಪುಟಕ್ಕೆ ಬಂದಿದ್ದಾರೆ. ಅವರು ಸಚಿವರಾಗಿರುವಾಗ ಸದನ ನಡೆಸಲು ಅವಕಾಶ ನೀಡುವುದಿಲ್ಲ. ಆದ್ದರಿಂದ ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.