ಸಚಿವ ಡಾ.ಶರಣಪ್ರಕಾಶ ಪಾಟೀಲ ಗೆಲುವಿಗಾಗಿ ಹೊತ್ತಿದ್ದ ಹರಕೆ ಪೂರೈಸಿದ ಅಭಿಮಾನಿ
"ಅಭಿಮಾನ" ಎಂಬ ಪ್ರೀತಿಯ ಹರಕೆ ಹಲವರಿಗೆ ಆಶೀರ್ವಾದ ರೀತಿಯಲ್ಲಿ ಯಾವ ರೀತಿಯ ಕೆಲಸ ಮಾಡುತ್ತದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಇದಕ್ಕೆ ಮತ್ತೊಂದು ಸೇರ್ಪಡೆಯಾಗಿರುವುದು ಸೇಡಂನ ಅಭಿಮಾನಿಯ ಹರಕೆ. ಈ ಅಭಿಮಾನಿಯ ಪ್ರೀತಿಯ ಕಥೆ ಹೀಗಿದೆ.
ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದು ಅಭಿಮಾನಿ ಪ್ರಶಾಂತ್ ಉಪ್ಪಿನ್ ಹರಕೆ ಹೊತ್ತಿದ್ದರು. ಶರಣಪ್ರಕಾಶ್ ಪಾಟೀಲ್ ಗೆಲುವು ಸಾಧಿಸಿದರೆ 15 ಕಿ.ಮೀ. ದೀರ್ಘ ದಂಡ ನಮಸ್ಕಾರ ಪೂರೈಸುವುದಾಗಿ ಹರಕೆ ಹೊತ್ತಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರಿಂದ ಈಗ ಹರಕೆ ಪೂರೈಸಿದ್ದಾರೆ. ಸೇಡಂ ತಾಲೂಕಿನ ರುದ್ನೂರು ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಕಾಶ್ ಉಪ್ಪಿನ ರುದ್ನೂರು ಗ್ರಾಮದಿಂದ ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದವರೆಗೆ 15 ಕಿ.ಮೀ ದೀರ್ಘ ದಂಡ ನಮಸ್ಕಾರ ಮಾಡುವ ಮೂಲಕ ಹರಕೆ ಪೂರೈಸಿದ್ದಾರೆ.


