ಜಾತಿ ವಿಷ ಬೀಜ ಬಿತ್ತಲು ಹೊರಟ ಸರ್ಕಾರ: ಮಹೇಶ್ ಟೆಂಗಿನಕಾಯಿ

ಶಾಲೆಗಳಲ್ಲಿ ಹಿಜಾಬ್‍ಗೆ ಯಾರೇ ಅವಕಾಶ ಕೇಳದೇ ಇದ್ದರೂ ಕಾಂಗ್ರೆಸ್, ಹಳೇ ವಿವಾದವನ್ನು ಮುನ್ನೆಲೆಗೆ ತರಬೇಕು ಎಂದು ಈ ರೀತಿ ಮಾಡುತ್ತಿದೆ. ದಾವಣಗೆರೆಯಲ್ಲಿ ನಡೆದ ಉಪ ಚುನಾವಣೆ ನಂತರ ಆಂತರಿಕ ಘರ್ಷಣೆ ಮುಚ್ಚಿ ಹಾಕಲು ಸರ್ಕಾರ ಹಿಜಾಬ್ ಗೆ ಅವಕಾಶ ನೀಡಿದೆ. ಇದಕ್ಕೆ ಬಿಜೆಪಿ ವಿರೋಧವಿದೆ. ಇದಕ್ಕೆ ಹೋರಾಟ ಮಾಡೇ ಮಾಡುತ್ತೇವೆ ಎಂದರು.

May 14, 2026 - 20:06
ಜಾತಿ ವಿಷ ಬೀಜ ಬಿತ್ತಲು ಹೊರಟ ಸರ್ಕಾರ: ಮಹೇಶ್ ಟೆಂಗಿನಕಾಯಿ

ಬೆಂಗಳೂರು, ಮೇ 14: ಕಾಂಗ್ರೆಸ್ ಸರ್ಕಾರ ಹಿಜಾಬ್ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದು ಮಕ್ಕಳಲ್ಲಿ ಮತೀಯ ವಿಷ ಬೀಜ ಬಿತ್ತಲು ಶುರು ಮಾಡಿದೆ ಎಂದು ಶಾಸಕ ಮಹೇಶ್ ಟೆಂಗಿನಕಾಯಿ ಅವರು ಆರೋಪಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2022 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ವಸ್ತ್ರ ಸಂಹಿತೆ ಬೇಕು ಎಂದು ನ್ಯಾಯಾಲಯವು ಸಹ ಎತ್ತಿ ಹಿಡಿದಿತ್ತು. ಆದರೆ ಇಂದು ಕಾಂಗ್ರೆಸ್ ಸರ್ಕಾರ ಹಿಜಾಬ್ ಧರಿಸಲು ತೀರ್ಮಾನ ಕೈಗೊಂಡಿದೆ ಎಂದು ದೂರಿದರು. ದಾವಣಗೆರೆ ಉಪ ಚುನಾವಣೆ ನಂತರ ಸರ್ಕಾರಕ್ಕೆ ಹೆದರಿಕೆ, ಅಂಜಿಕೆ ಆರಂಭವಾಗಿದೆ. ಅಲ್ಪ ಸಂಖ್ಯಾತರನ್ನು ಓಲೈಸಲು ಯತ್ನಿಸುತ್ತಿದೆ. ಅದಕ್ಕಾಗಿ ಇಂತಹ ಪ್ರಯತ್ನ ಮಾಡುತ್ತಿದೆ ಎಂದರು.

ಶಿಕ್ಷಣ ಸಚಿವರು ಮತ್ತು ಸರ್ಕಾರ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳಲ್ಲಿ ಮತೀಯ ಭಾವನೆ ಬಿತ್ತಬಾರದು ಎಂದರು. ಶಿಕ್ಷಣ ಕಲಿಯಲು ಬರುವವರು ಜಾತಿ, ಮತ, ಪಂಥ ಬಿಟ್ಟು ಬರಬೇಕು ಎನ್ನುತ್ತಾರೆ. ಒಂದೆ ರೀತಿಯ ಸಮವಸ್ತ್ರ ಹಾಕಿದಾಗ ನಾವೆಲ್ಲ ಒಂದೇ ಎಂಬ ಭಾವನೆ ಬರುತ್ತದೆ. ಎಲ್ಲರೂ ಒಂದಾಗಿ ಶಿಕ್ಷಣ ಕಲಿಯುತ್ತಾರೆ. ಆದರೆ ಯಾವುದೇ ಅಲ್ಪ ಸಂಖ್ಯಾತರು ಕೇಳದೆ ಇದ್ದರೂ ಹಿಜಾಬ್ ಧರಿಸಲು ಅವಕಾಶ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದರು.

ಶಾಲೆಗಳಲ್ಲಿ ಹಿಜಾಬ್‍ಗೆ ಯಾರೇ ಅವಕಾಶ ಕೇಳದೇ ಇದ್ದರೂ ಕಾಂಗ್ರೆಸ್, ಹಳೇ ವಿವಾದವನ್ನು ಮುನ್ನೆಲೆಗೆ ತರಬೇಕು ಎಂದು ಈ ರೀತಿ ಮಾಡುತ್ತಿದೆ ಎಂದು ಹೇಳಿದರು. ದಾವಣಗೆರೆಯಲ್ಲಿ ನಡೆದ ಉಪ ಚುನಾವಣೆ ನಂತರ ಆಂತರಿಕ ಘರ್ಷಣೆ ಮುಚ್ಚಿ ಹಾಕಲು ಸರ್ಕಾರ ಹಿಜಾಬ್ ಗೆ ಅವಕಾಶ ನೀಡಿದೆ. ಇದಕ್ಕೆ ಬಿಜೆಪಿ ವಿರೋಧವಿದೆ. ಇದಕ್ಕೆ ಹೋರಾಟ ಮಾಡೇ ಮಾಡುತ್ತೇವೆ ಎಂದರು.

ಅನೇಕ ಹಿಂದೂಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಸರ್ಕಾರ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಸರ್ಕಾರ ಹಿಜಾಬ್ ಸಂಬಂಧ ಹೊರಡಿಸಿದ ನಿರ್ಣಯವನ್ನು ಹಿಂದಕ್ಕೆ ಪಡೆಯಬೇಕು. ನ್ಯಾಯಾಲಯ ಏನು ಹೇಳಿತ್ತೋ ಅದರಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೋರ್ಟ್ ಹೇಳಿದ್ದನ್ನು ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ. ಈ ರೀತಿ ಅನಗತ್ಯ ಹೇರಿಕೆ ಮಾಡಿ ವಿದ್ಯಾರ್ಥಿಗಳಲ್ಲಿ ಒಡೆದಾಳುವ ನೀತಿ ಮೂಲಕ ಮತೀಯ ಭಾವನೆ ಹರಡಲು ಸರ್ಕಾರ ಮುಂದಾಗಬಾರದು ಎಂದರು.