B.Nagendra: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

B.Nagendra: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ಸ್ವ ಇಚ್ಛೆಯಿಂದ ನೀಡಿದ್ದಾರೆ.

Aug 28, 2026 - 18:50
Aug 28, 2026 - 19:00
B.Nagendra: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ
ಚಿತ್ರ ಕೃಪೆ @ Deccan Chronicle

ಬೆಂಗಳೂರು: ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ (B.Nagendra) ಇಂದು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಘೋಷಣೆ ಮಾಡಿದ್ದಾರೆ.

'ನಾನು ಸಂವಿಧಾನಕ್ಕೆ ತಲೆಬಾಗಿ, ಪಕ್ಷಕ್ಕೆ ಮುಜುಗರ ಆಗಬಾರದು ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಯಾವುದೇ ಹಿನ್ನಡೆಯಾಗಬಾರದು ಎಂಬ ಒಂದೇ ಕಾರಣಕ್ಕೆ ನನ್ನ ಸ್ವ ಇಚ್ಛೆಯಿಂದ ಇಂದು ರಾಜೀನಾಮೆ ಸಲ್ಲಿಸುತ್ತಿದ್ದೇನೆ' ಎಂದು ಹೇಳಿದ್ದಾರೆ.  

'ನಾನು ಒಬ್ಬ ದಲಿತ, ಆದಿವಾಸಿ ಸಮುದಾಯದಿಂದ ಬಂದವನು. ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತಿದ್ದೇನೆ' ಎಂದು ಕಣ್ಣೀರು ಹಾಕಿದ್ದಾರೆ.

ನಾನು ಒಬ್ಬ ಶೋಷಿತ ಸಮಾಜದಿಂದ ಬಂದವನು. ನನ್ನ ಏಳಿಕೆಯನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ಬರೀ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ. ಹೀಗಾಗಿ, ನಾನು ಕೇವಲ ಸಚಿವ ಸ್ಥಾನಕ್ಕೆ ಮಾತ್ರವಲ್ಲ; ಹೈಕಮಾಂಡ್‌ ಅನುಮತಿ ಕೊಟ್ಟರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಆ ಮೂಲಕ ಜನತಾ ನ್ಯಾಯಾಲಯದಲ್ಲಿ ನಾನು ದೋಷಮುಕ್ತನಾಗಿ ಬರುವುದಕ್ಕೆ ಸಿದ್ಧನಿದ್ದೇನೆ. ಬನ್ನಿ ನೀವು ಚುನಾವಣಾ ಕಣಕ್ಕೆ ಎಂಬುದಾಗಿ ಬಿಜೆಪಿ ನಾಯಕರಿಗೆ ನಾಗೇಂದ್ರ ಅವರು ಸವಾಲು ಹಾಕಿದ್ದಾರೆ.

ಇದರೊಂದಿಗೆ ಡಿಕೆ ಶಿವಕುಮಾರ್‌ ಅವರು ಅಧಿಕಾರಕ್ಕೆ ಬಂದ ಮೂರೇ ತಿಂಗಳಿನಲ್ಲಿ ಇದೀಗ ಸಂಪುಟದ ಮೊದಲ ವಿಕೆಟ್‌ ಪತನಗೊಂಡಿದೆ. ಪಕ್ಷಕ್ಕೆ ಹಾಗೂ ವರಿಷ್ಠರಿಗೆ ಮುಜುಗರ ಉಂಟಾಗಬಾರದು ಎಂಬ ಏಕೈಕ ಕಾರಣಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ನಾಗೇಂದ್ರ ಪುನರುಚ್ಚಾರ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲಿಯೂ ಮಂತ್ರಿಯಾಗಿದ್ದ ನಾಗೇಂದ್ರ ಅವರು ಬಳಿಕ ವಾಲ್ಮೀಕಿ ನಿಗಮದ ಹಗರಣದಲ್ಲಿ ಆರೋಪ ಕೇಳಿ ಬಂದಾಗ ಅನಿವಾರ್ಯವಾಗಿ ರಾಜೀನಾಮೆಯನ್ನು ನೀಡಿದ್ದರು. ಹೀಗಿರುವಾಗ, ಕಾಂಗ್ರೆಸ್‌ ಸರ್ಕಾರದಲ್ಲಿ ಇದೀಗ ನಾಗೇಂದ್ರ ಅವರು 2ನೇ ಬಾರಿಗೆ ಸಚಿವ ಸ್ಥಾನದಿಂದ ಕೆಳಗಿಳಿಯುವ ಇಕ್ಕಟ್ಟಿಗೆ ಸಿಲುಕಿಕೊಂಡಿರುವುದು ಗಮನಾರ್ಹ. 

ಈ ನಡುವೆ ರಾಜೀನಾಮೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್‌ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. 

ಬಿಜೆಪಿ ಪಾಲಿಗೆ ದೊಡ್ಡ ಗೆಲುವು

ಇನ್ನೊಂದೆಡೆ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು ಪ್ರತಿಪಕ್ಷವಾಗಿರುವ ಬಿಜೆಪಿ ಪಾಲಿಗೆ ದೊಡ್ಡ ಗೆಲುವಾಗಿದೆ. ಮಳೆಗಾಲದ ಅಧಿವೇಶನ ಆರಂಭವಾಗಿದ್ದ ಮೊದಲ ದಿನದಿಂದಲೇ ಬಿಜೆಪಿಯು ನಾಗೇಂದ್ರ ಅವರ ರಾಜೀನಾಮೆಗೆ ಸದನದ ಒಳಗೆ ಹಾಗೂ ಹೊರಗೆ ಪಟ್ಟು ಹಿಡಿದಿದ್ದರು. ಕೊನೆಗೂ ಗಲಾಟೆ ಜೋರಾದ ಕಾರಣ ವಿಧಾನಮಂಡಲದ ಅಧಿವೇಶನವನ್ನು ಕೂಡ ಮೂರು ದಿನ ಮೊದಲೇ ಮುಕ್ತಾಯಗೊಳಿಸಲಾಗಿತ್ತು. ನಾಗೇಂದ್ರ ರಾಜೀನಾಮೆ ನೀಡುವವರೆಗೂ ಸುಮ್ಮನಾಗುವುದಿಲ್ಲ ಎಂದು ಬಿಜೆಪಿ ನಾಯಕರು ಕೂಡ ಹೇಳಿದ್ದರು. ಅದರಂತೆ ಬಿಜೆಪಿಯ ಒತ್ತಡ ಹಾಗೂ ಹೋರಾಟಕ್ಕೆ ಮಣಿದು ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದ್ದು, ಅದರಂತೆ ಮಂತ್ರಿ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ. ಇದು ಪ್ರತಿಪಕ್ಷವಾಗಿ ಬಿಜೆಪಿ ಪಾಲಿಗೆ ದೊಡ್ಡ ಗೆಲುವು ಎನ್ನುವುದರಲ್ಲಿ ಎರಡು ಮಾತಿಲ್ಲ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.