ತಾಳಿಪಾಡಿಯ ರಾಜಕಾಲುವೆಗೆ ತಡೆಗೋಡೆ

ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ರಾಜ ಕಾಲುವೆಯಲ್ಲಿ ನೀರು ಉಕ್ಕಿ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿತ್ತು. ಆದ ಕಾರಣ ಸ್ಥಳೀಯರ ಬೇಡಿಕೆಯಂತೆ ಈ ಪ್ರಮುಖ ಕಾಮಗಾರಿಗೆ ಚಾಲನೆ ನೀಡಲಾಗಿದೆ

May 11, 2026 - 21:35
ತಾಳಿಪಾಡಿಯ ರಾಜಕಾಲುವೆಗೆ ತಡೆಗೋಡೆ

ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಕೊಡಿಯಾಲ್ ಬೈಲ್ ವಾರ್ಡಿನ ತಾಳಿಪಾಡಿ ಮನೆ ಎದುರಿನ ಶರಾವತಿ ಅಪಾರ್ಟ್ಮೆಂಟ್ ಬಳಿಯ ರಾಜಕಾಲುವೆಗೆ ಸುಮಾರು 30 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣವಾಗಲಿದ್ದು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಶಿಲನ್ಯಾಸ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು, ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ರಾಜ ಕಾಲುವೆಯಲ್ಲಿ ನೀರು ಉಕ್ಕಿ ಸ್ಥಳೀಯರಿಗೆ ತೀವ್ರ ತೊಂದರೆಯಾಗುತ್ತಿತ್ತು. ಆದ ಕಾರಣ ಸ್ಥಳೀಯರ ಬೇಡಿಕೆಯಂತೆ ಈ ಪ್ರಮುಖ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳಲಿ ಎಂದು ಆಶಿಸುತ್ತೇನೆ ಎಂದರು.

ಪಕ್ಕದ ಎಂ.ಜಿ ರಸ್ತೆಯ ಭಾಗದಲ್ಲಿ ಒಂದು ಬ್ರಿಡ್ಜ್ ನಿರ್ಮಾಣವಾಗಬೇಕಿದ್ದು ಅದಕ್ಕೆ ಎರಡು ಕೋಟಿ ಅನುದಾನವನ್ನು ಸಹ ಮೀಸಲಿಡಲಾಗಿದೆ. ಅದು ಪೂರ್ಣಗೊಂಡರೆ ನೀರು ಸರಾಗವಾಗಿ ಹರಿದು ಹೋಗಿ ಇಲ್ಲಿ ಕೃತಕ ನೆರೆ ಕಡಿಮೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವರಿಕೆ ಮಾಡಲಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ವಿಳಂಬವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಣೆಗಾಗಿ ಪ್ರಯತ್ನ ಮುಂದುವರಿಸಿ ಈ ಭಾಗದ ಜನರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಮುಖರಾದ ಯಶವಂತ ಕುದ್ರೋಳಿ, ಚಂದ್ರಶೇಖರ ಶೆಟ್ಟಿ, ಸಿದ್ಧಾರ್ಥ್, ಜೀವಿತ್, ಮೀರಾ ಶೆಟ್ಟಿ, ಭಾರತಿ ಶೆಟ್ಟಿ, ಜಗನ್ನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.