ಬಂಟ್ವಾಳ: ಶಾಲಾ ಬಸ್ ಮೇಲೆ ಮರ ಬಿದ್ದು 6 ವರ್ಷದ ಬಾಲಕಿ ದಾರುಣ ಸಾವು
ಶಾಲೆ ಬಿಟ್ಟ ಬಳಿಕ ಮಕ್ಕಳನ್ನು ಕರೆತರುತ್ತಿದ್ದ ಬಸ್ ಮೇಲೆ ಮರ ಬಿದ್ದು 6 ವರ್ಷದ ಚಿರಣ್ವಿ ಎಂಬ ಬಾಲಕಿ ದಾರುಣವಾಗಿ ಪ್ರಾಣಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳದ ಬರಿಮಾರು ಬಳಿ ನಡೆದಿದೆ.
ಬಂಟ್ವಾಳ: ಭಾರೀ ಮಳೆಯಿಂದಾಗಿ(heavy rain) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ(bantwala) ಬರಿಮಾರು ಗ್ರಾಮದ ಕಲ್ಲೇಟ್ಟಿ ದೈವಸ್ಥಾನದ ಬಳಿ ಚಲಿಸುತ್ತಿದ್ದ ಶಾಲಾ ವಾಹನದ(school bus) ಮೇಲೆ ಮರ ಬಿದ್ದು, ಆರು ವರ್ಷದ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಒಂದನೇ ಕ್ಲಾಸ್ ಓದುತ್ತಿರುವ ಚಿರಣ್ವಿ(chiranvi died) ಎಂದು ಗುರುತಿಸಲಾಗಿದೆ. ದುರಂತವೆಂದರೆ, ಎಂದಿನಂತೆ ಬೆಳಗ್ಗೆ ಶಾಲೆಗೆ ತೆರಳಿದ್ದ ಮಗು ಸಂಜೆ ಮನೆಗೆ ಬರುವ ಬದಲು ಸಾವಿನ ಮನೆ ಸೇರಿರುವುದು ನಿಜಕ್ಕೂ ಹೃದಯವಿದ್ರಾವಕ ಘಟನೆಯಾಗಿದೆ.
ಕಲ್ಲಡ್ಕಡ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ ಬಸ್ ಇದಾಗಿದ್ದು, ಎಂದಿನಂತೆ ಬಸ್ನಲ್ಲಿ ಶಾಲೆ ಬಿಟ್ಟ ಬಳಿಕ ಮಕ್ಕಳನ್ನು ಮನೆಗೆ ಕರೆದೊಯ್ಯಲಾಗುತ್ತಿತ್ತು. ಬಹುತೇಕ ಎಲ್ಲ ಮಕ್ಕಳು ಮನೆಗೆ ಸುರಕ್ಷಿತವಾಗಿ ಸೇರಿದ್ದರು. ಆದರೆ, ವಿಧಿ ಮಾತ್ರ ಚಿರಣ್ವಿ ಜೀವ ಕಿತ್ತುಕೊಳ್ಳುವುದಕ್ಕೆ ಕಾಯುತ್ತಿತ್ತು ಕಾಣಬೇಕು. ಇನ್ನೇನು ಮನೆಗೆ ಬಂದು ತಲುಪಬೇಕು ಎನ್ನುವಷ್ಟರಲ್ಲಿ ಚಲಿಸುತ್ತಿದ್ದ ಬಸ್ನ ಮೇಲೆ ಏಕಾಏಕಿ ಬೃಹತ್ ಮರ ಉರುಳಿ ಬಿದ್ದಿದೆ. ಪಕ್ಕದಲ್ಲೇ ಒಂದು ಕಟ್ಟಡವಿದ್ದರು ಕೂಡ ಬಸ್ನ ಮೇಲೆ ಮರ ಬಿದ್ದು ಬಿಟ್ಟಿದ್ದು, ಅದರಡಿ ಸಿಲುಕಿಕೊಂಡಿದ್ದ ಈ ಪುಟ್ಟ ಮಗು ಪ್ರಾಣ ಕಳೆದುಕೊಂಡಿದೆ.

ಆದರೆ, ಬಸ್ನಲ್ಲಿ ಇನ್ನು ಕೂಡ ಇಬ್ಬರು ಮಕ್ಕಳು ಇದ್ದು, ಅವರಿಗೂ ಗಾಯಗಳಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಸಚಿವ ಖಾದರ್ ದಿಗ್ಭ್ರಮೆ
ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಮರ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆಗೆ ಆರೋಗ್ಯ ಸಚಿವ ಯು ಟಿ ಖಾದರ್ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರು, ಸಾವನ್ನಪ್ಪಿದ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ವಿಚಾರಣೆ ನಡೆಸುವಂತೆ ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.