Puttur: ಜ್ಞಾನವನ್ನು ಹುಡುಕುವುದು ಮಾತ್ರವಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಡಾ.ಮನಮೋಹನ ಹೇಳಿಕೆ
Puttur: ವಿವೇಕಾನಂದ ಕಾಲೇಜಿನಲ್ಲಿ 'ಭಾರತೀಯ ಜ್ಞಾನ ಪರಂಪರೆಯ ಜೀವನೋಪಯೋಗಿತ್ವ ಉಪನ್ಯಾಸ ಸರಣಿ' ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುತ್ತೂರು: ಭಾರತೀಯ ಜ್ಞಾನ ಪರಂಪರೆ ಎನ್ನುವುದು ಸಂಕೀರ್ಣ ವಿಷಯದೊಂದಿಗೆ, ಕಷ್ಟದ ವಿಷಯವೂ ಹೌದು. ಈ ಜ್ಞಾನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ. ಪ್ರಾಚೀನ ಸಂಗತಿಯನ್ನಿಟ್ಟುಕೊಂಡು ಅಭ್ಯಾಸದೊಂದಿಗೆ, ಹಳೆಯ ಜ್ಞಾನದ ಶಕ್ತಿಯನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ವಿಶೇಷ ಅಧಿಕಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಮನಮೋಹನ ಎಂದು ಹೇಳಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ & ಸಂಶೋಧನಾ ಕೇಂದ್ರ, ಸ್ನಾತಕೋತ್ತರ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ, ವಾಣಿಜ್ಯ ವಿಭಾಗದಿಂದ ನಡೆದ 'ಭಾರತೀಯ ಜ್ಞಾನ ಪರಂಪರೆಯ ಜೀವನೋಪಯೋಗಿತ್ವ ಉಪನ್ಯಾಸ ಸರಣಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯಾದರೆ, ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆಯಾಗಿದೆ ಎಂದರ್ಥ. ಇದಕ್ಕೆ ಕಾರಣ, ಸರಿ - ತಪ್ಪುಗಳನ್ನು ತಿಳಿದುಕೊಳ್ಳುವ ಜ್ಞಾನವನ್ನು ಶಿಕ್ಷಣ ನೀಡುತ್ತದೆ. ಜ್ಞಾನವನ್ನು ಹುಡುಕುವುದು ಮಾತ್ರವಲ್ಲದೆ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿಗಳಿಗೂ ಅಗತ್ಯವಾಗಿರುವ ವಿಷಯ ಎಂದರೆ, ಅದು ಭಾರತೀಯ ಜ್ಞಾನ ಪರಂಪರೆ. ಇವುಗಳ ಅಗತ್ಯತೆಯ ಕುರಿತಾದ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಯುವುದರಿಂದ ಮುಂದೆ ಓದಿನಲ್ಲಿ ಜ್ಞಾನವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಡಾ.ವಿಜಯ ಸರಸ್ವತಿ ಬಿ, ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಸ್ವರ್ಣ ಮತ್ತು ಪ್ರಥಮ ಎಂಕಾಂ ವಿದ್ಯಾರ್ಥಿ ಶಿವಾನ್ ರಾಜ್ ಆರ್ ಉಪಸ್ಥಿತರಿದ್ದರು. ಪ್ರಥಮ ಎಂಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಯು.ಕೆ ಸ್ವಾಗತಿಸಿದರು. ಡಿ.ಮನ್ವಿತಾ ವಂದಿಸಿದರು. ಸ್ವಾತಿ ಎನ್.ಡಿ ನಿರೂಪಿಸಿದರು.