ಮುಂಬೈ: ಭಾರತವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಡಲಿದೆ. ಸದ್ಯ ಬಿಸಿಸಿಐ (BCCI) 15 ಆಟಗಾರರನ್ನು ಒಳಗೊಂಡ ಅಧಿಕೃತ ತಂಡವನ್ನು ಪ್ರಕಟಿಸಿದೆ. ಶುಭಮನ್ ಗಿಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಮೂವರು ಕನ್ನಡಿಗರಿಗೂ ಅವಕಾಶ ಲಭ್ಯವಾಗಿದೆ. ಉಪನಾಯಕನಾಗಿ ಕೆ.ಎಲ್.ರಾಹುಲ್, ಪ್ರಸಿದ್ಧ್ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದು, ತಂಡಕ್ಕೆ ಹಿಂದಿರುಗಿದ್ದಾರೆ. ಇವರೊಂದಿಗೆ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ರಿಷಭ್ ಪಂತ್, ಧ್ರುವ್ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್ ಹಾಗೂ ಕುಲದೀಪ ಯಾದವ್ ಅವರುಗಳು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಆಗಸ್ಟ್ 23 ರಿಂದ 27 ರವರೆಗೆ ಎರಡನೇ ಟೆಸ್ಟ್ ಪಂದ್ಯವು ಕೊಲಂಬೊದಲ್ಲಿ ಜರುಗಲಿದೆ.