ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಪವಿತ್ರ 'ಪಶುಪತಿನಾಥ ದೇಗುಲ'ವು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಭಗವಾನ್ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ಕೇವಲ ಶಿವನಷ್ಟೇ ಅಲ್ಲ, ಅವನಿಗೆ ಅತ್ಯಂತ ಪ್ರಿಯವಾದ ವಾಸುಕಿ ನಾಗನಿಗೂ ವಿಶೇಷ ಸ್ಥಾನವಿದೆ.
ಪುರಾಣ ಕಥೆ ಏನು:
'ವಾಸುಕಿ ನಾಗ' ನಾಗರಾಜನಾಗಿದ್ದು, ಸಮುದ್ರ ಮಂಥನದ ಕಥೆಯಲ್ಲಿ ದೇವತೆಗಳು ಹಾಗೂ ಅಸುರರು ಮಂದರ ಪರ್ವತವನ್ನು ಕಡೆಯಲು ವಾಸುಕಿಯನ್ನೇ ಹಗ್ಗವಾಗಿ ಬಳಸಿದ್ದರು. ವಿಷದಿಂದ ಜಗತ್ತನ್ನು ರಕ್ಷಿಸಲು ಶಿವನು ಹಾಲಾಹಲವನ್ನು ಕುಡಿದಾಗ, ಆ ವಿಷದ ಉಷ್ಣತೆಯನ್ನು ಕಡಿಮೆ ಮಾಡಲು ವಾಸುಕಿಯು ಶಿವನ ಕೊರಳನ್ನು ಸುತ್ತಿಕೊಂಡನು ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಶಿವನನ್ನು ನಾಗಾಭರಣ, ನಾಗೇಶ್ವರ ಎಂದು ಕರೆಯುತ್ತಾರೆ. ವಾಸುಕಿಯು ಭಕ್ತಿ, ತ್ಯಾಗ ಮತ್ತು ಶಿವನ ಮೇಲಿನ ಅಚಲ ನಂಬಿಕೆಯ ಸಂಕೇತವಾಗಿದೆ.
ಪಶುಪತಿನಾಥದಲ್ಲಿ ವಾಸುಕಿಯ ಸಾನ್ನಿಧ್ಯ:
ಪಶುಪತಿನಾಥ ದೇವಾಲಯದ ಗರ್ಭಗುಡಿಯ ಪೂರ್ವ ದ್ವಾರದ ಮುಂದೆ, ವಾಸುಕಿ ನಾಗನ ಪ್ರಾಚೀನ ಕಲ್ಲಿನ ವಿಗ್ರಹವಿದ್ದು, ಶಿವಲಿಂಗಕ್ಕೆ ಕಾವಲು ಕಾಯುತ್ತಿರುವಂತೆ ನಿಂತಿದೆ. ಭಕ್ತರು ಪಶುಪತಿನಾಥನ ದರ್ಶನಕ್ಕಿಂತ ಮೊದಲು ವಾಸುಕಿ ನಾಗನಿಗೆ ಮೊದಲು ನಮಸ್ಕರಿಸುವುದು ಸಂಪ್ರದಾಯ. ವಾಸುಕಿಯು ಪಶುಪತಿನಾಥನ ದ್ವಾರಪಾಲಕನೆಂದು ನಂಬಲಾಗಿದೆ.
ಇಲ್ಲಿ ನಾಗ ಪಂಚಮಿಯ ದಿನದಂದು ವಿಶೇಷ ಪೂಜೆ ನಡೆಯುತ್ತದೆ. ನಾಗ ದೋಷ, ಕಾಲಸರ್ಪ ದೋಷ ಹಾಗೂ ಸಂತಾನ ದೋಷವಿರುವ ಭಕ್ತರು ವಾಸುಕಿ ನಾಗನಿಗೆ ಹಾಲು, ಕುಂಕುಮ, ಹೂವುಗಳನ್ನು ಅರ್ಪಿಸಿ ಪ್ರಾರ್ಥಿಸಿದರೆ, ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಬಾಗ್ಮತಿ ನದಿಯ ದಡದಲ್ಲಿರುವ ಈ ನಾಗನ ಸಾನ್ನಿಧ್ಯದಲ್ಲಿ ಮಾಡುವ ಪ್ರಾರ್ಥನೆಯು ನೇರವಾಗಿ ಶಿವನನ್ನು ತಲುಪುತ್ತದೆ ಎಂದು ಹೇಳಲಾಗತ್ತದೆ.
ವಾಸುಕಿ ನಾಗನು ಕೇವಲ ಒಂದು ವಿಗ್ರಹವಲ್ಲ. ಅವನು ಶಿವನ ಉಸಿರು. ಶಿವನಿಲ್ಲದೆ ನಾಗನಿಲ್ಲ, ನಾಗನಿಲ್ಲದೆ ಶಿವನ ಅಲಂಕಾರ ಪೂರ್ಣವಲ್ಲ. ಪಶುಪತಿನಾಥಕ್ಕೆ ಹೋದಾಗ ವಾಸುಕಿಯನ್ನು ದರ್ಶನ ಮಾಡಿದರೆ ಮಾತ್ರ ಯಾತ್ರೆ ಸಂಪೂರ್ಣವಾಗುತ್ತದೆ.