ಕೇವಲ ಚುನಾವಣಾ ತಂತ್ರಗಾರಿಕೆಗೆ ಗ್ಯಾರಂಟಿ ಬಳಕೆ: ವಿಜಯೇಂದ್ರ
ಮುಖ್ಯಮಂತ್ರಿ ಕುರ್ಚಿಗೆ ಕಾಳಗ ನಡೆಯುತ್ತಿರುವುದರಿಂದ ನೂರಾರು ಕೋಟಿ ಹಣ ಪೋಲು ಮಾಡಿ ತುಮಕೂರು ಸಮಾವೇಶ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ.
ಬೆಂಗಳೂರು, ಮೇ 19: ಮುಖ್ಯಮಂತ್ರಿಗಳೇ, ಯಾವ ಪುರುಷಾರ್ಥಕ್ಕೆ ನೀವು ತುಮಕೂರಿನಲ್ಲಿ ಸಾಧನಾ ಸಮಾವೇಶ ಹಮ್ಮಿಕೊಂಡಿದ್ದೀರಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಳಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳಲ್ಲಿ ತಾವು ಮಾಡಿದ ಸಾಧನೆಯಾದರೂ ಏನು? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿವೆಯೇ? ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೀರಾ ಎಂದು ಪ್ರಶ್ನಿಸಿದರು.
ನಾಡಿಗೆರಡು ತುತ್ತು ಅನ್ನ ಕೊಡುವ ರೈತರ ಬದುಕನ್ನು ಕಟ್ಟಿಕೊಡುವ ಸಲುವಾಗಿ ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ನಿಮ್ಮ ಸರಕಾರ ಬಂದಿದೆಯೇ ಎಂದು ಕೇಳಿದರು. ಇದ್ಯಾವುದನ್ನೂ ಮಾಡದೇ, ಗ್ಯಾರಂಟಿಗಳ ನೆಪ ಒಡ್ಡಿಕೊಂಡು ರಾಜ್ಯ ಸರಕಾರವು ಜನರ ಪಾಲಿಗೆ ಬದುಕಿದೆ ಎಂಬುದನ್ನು ನೆನಪಿಸುವ ಕಾರ್ಯವನ್ನು ಈ ಸಾಧನಾ ಸಮಾವೇಶದ ಮೂಲಕ ತಾವು ಮಾಡುತ್ತ ಇದ್ದೀರಿ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಸರಕಾರವು ಕೇವಲ ಜಾಹೀರಾತಿನ ಮೂಲಕ ತಮ್ಮ ಯಶಸ್ಸನ್ನು ಬಿಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ನಿಮ್ಮ ಗೆಲುವಿಗೆ ಗ್ಯಾರಂಟಿಗಳು ಸಹಕರಿಸಿವೆ. ಗ್ಯಾರಂಟಿ ಹಣ ಬಿಡುಗಡೆ ಮಾಡಿ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತ ಇದ್ದೀರಿ ಎಂದು ದೂರಿದರು. ಈ ಗೆಲುವಿನ ನಾಗಾಲೋಟ ಬಹಳ ದಿನ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹಿಂದೆಯೂ ಕಾಂಗ್ರೆಸ್ ಸರಕಾರವು ಅಸ್ತಿತ್ವದಲ್ಲಿ ಇದ್ದಾಗ ಇದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ನಂಜನಗೂಡು, ಬೇರೆ ಉಪ ಚುನಾವಣಾ ಫಲಿತಾಂಶ ಏನಾಗಿತ್ತು ಎಂದು ಕೇಳಿದರು. ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ನಿಮ್ಮನ್ನು ಮನೆಗೆ ಕಳಿಸಿದ್ದನ್ನು ತಾವು ಮರೆತಿಲ್ಲ ಎಂದು ಭಾವಿಸುವುದಾಗಿ ಹೇಳಿದರು.
ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಈ ಸರಕಾರದಿಂದ ಬಳಸುವ ಆಗುತ್ತಿದೆ. ಗ್ಯಾರಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುವ ಕೆಲಸವನ್ನು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ರಸ್ತೆಗೆ ಆದ್ಯತೆ ನೀಡಿದ್ದೀರಾ? ನೀರಾವರಿ ಯೋಜನೆಗಳಿಗೆ ಹಣ ಒದಗಿಸಿದ್ದೀರಾ? ಆಸ್ಪತ್ರೆಗಳು, ಶಾಲೆಗಳಿಗೆ ಕಾಂಗ್ರೆಸ್ ಸರಕಾರ ನೀಡಿದೆಯೇ? ಅಭಿವೃದ್ಧಿಯನ್ನು ಕಣ್ಮುಂದೆ ಇಟ್ಟುಕೊಂಡು ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲು ನಿಮಗೆ ಸಾಧ್ಯ ಆಗಿದೆಯೇ ಎಂದು ಕೇಳಿದರು.
ರಸ್ತೆ ಗುಂಡಿ ಮುಚ್ಚಿಲ್ಲ; ರೈತರ ಕಷ್ಟಕ್ಕೆ ಸ್ಪಂದಿಸಿಲ್ಲ..
ಇವರ ಯೋಗ್ಯತೆಗೆ ಬೆಂಗಳೂರು ಮಹಾನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯ ಆಗುತ್ತಿಲ್ಲ. ಕೃಷಿ ಕ್ಷೇತ್ರದ ಬಗ್ಗೆ ಈ ಸರಕಾರ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಸಂಕಷ್ಟದಲ್ಲಿ ಇರುವ ರೈತರಿಗೆ ಸಾಂತ್ವನ ಹೇಳುವ ಸಂವೇದನೆ ಕೂಡ ಈ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂಬುದು ದುರ್ದೈವ ಎಂದು ಟೀಕಿಸಿದರು. ನೆರೆ ಮತ್ತು ಬರದ ಸಂದರ್ಭದಲ್ಲಿ ನೆರವಿಗೆ ಇವರು ಧಾವಿಸಿಲ್ಲ ಎಂದು ಆಕ್ಷೇಪಿಸಿದರು.
ಸಿಎಂ ರಾಜೀನಾಮೆ ಕೊಡಬೇಕಿತ್ತು..
ಉದ್ಯೋಗ ಸೃಷ್ಟಿ ಕುರಿತು ಸಾಕಷ್ಟು ಮಾತನಾಡುತ್ತಾರೆ. ಯುವಜನತೆ ಜೀವನದ ಜೊತೆ ಚೆಲ್ಲಾಟ ಆಡುವ ಕಾಂಗ್ರೆಸ್ ಸರಕಾರದ ಅಹಿಂದ ಮುಖವಾಡವೂ ಕಳಚಿಬಿದ್ದಿದೆ ಎಂದು ನುಡಿದರು. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ಹಲವಾರು ಬಾರಿ ಹೇಳಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆದಾಗಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕಾಗಿತ್ತು ಎಂದು ತಿಳಿಸಿದರು. ಈ ಹಗರಣದ ಕುರಿತು ಸದನದಲ್ಲೇ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದು, ಸಚಿವರು ರಾಜೀನಾಮೆ ಕೊಟ್ಟಿದ್ದನ್ನು ನೆನಪಿಸಿದರು. ಮತ್ತೊಂದು ಕಡೆ ‘ಮುಡಾ’ ಹಗರಣ ನಡೆದಿದೆ. 14 ನಿವೇಶನ ವಾಪಸ್ ಮಾಡಿದ್ದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಈ ಥರದ ಶಿಕ್ಷಣ ಸಚಿವರು ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಬಂದಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಶಿಕ್ಷಣ ನೀತಿಯನ್ನು ತರಲು ಇವರಿಗೆ ಸಾಧ್ಯವಾಗಿಲ್ಲ; ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ (ಎನ್ಇಪಿ) ಅನುಷ್ಠಾನ ಮಾಡುತ್ತಿಲ್ಲ. ಶಿಕ್ಷಣ ಕ್ಷೇತ್ರದಲ್ಲೂ ಗೊಂದಲ ಸೃಷ್ಟಿಸಿ ರಾಜ್ಯದ ಮಕ್ಕಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ದೂರಿದರು. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಗಮನ ಸೆಳೆದರು.
ರಾಜ್ಯ ಸರಕಾರದ ಎಡವಟ್ಟಿನಿಂದಾಗಿ 6500 ಗ್ರಾಮೀಣ ಗ್ರಂಥಾಲಯಗಳು ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಮೂಲಭೂತ ಸೌಕರ್ಯ ಕೊರತೆಯಿಂದ 15 ತಿಂಗಳಿನಿಂದ 550ಕ್ಕೂ ಹೆಚ್ಚು ನವಜಾತ ಶಿಶುಗಳು ಮರಣ ಹೊಂದಿವೆ. ಗರ್ಭಿಣಿಯರು, ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಿನ ಬೆಳಗಾದರೆ ಕೊಲೆಗಳು ನಡೆಯುತ್ತಿವೆ. ಮುಖ್ಯಮಂತ್ರಿಗಳ ಜಿಲ್ಲೆಯು ಡ್ರಗ್ ಮಾಫಿಯಕ್ಕೆ ಇವತ್ತು ಕೇಂದ್ರವಾಗಿದೆ. ಮಾದಕವಸ್ತು ಉತ್ಪಾದನಾ ಫ್ಯಾಕ್ಟರಿಗಳು ಇರುವುದು ಪತ್ತೆಯಾಗಿದೆ ಎಂದು ವಿವರಿಸಿದರು. ಪೊಲೀಸ್ ಇಲಾಖೆ, ಮುಖ್ಯಮಂತ್ರಿಗಳಿಗೆ ಅವರ ಜಿಲ್ಲೆಯಲ್ಲಿ ಏನು ನಡೆಯುತ್ತಿದೆ ಎಂಬುದರ ಅಂದಾಜಿಲ್ಲ ಎಂದು ಟೀಕಿಸಿದರು.
ಅಹಿಂದ ಹೆಸರು ದುರ್ಬಳಕೆಯ ಅಪಕೀರ್ತಿ..
ಕ್ರಿಮಿನಲ್ ಚಟುವಟಿಕೆಯ ವ್ಯಕ್ತಿಗಳಿಗೆ ಭಯ ಹುಟ್ಟಿಸಬೇಕಾದ ಜೈಲುಗಳಲ್ಲಿ ಕೈದಿಗಳಿಗೆ ಕುಡಿಯುವ ವ್ಯವಸ್ಥೆ ಮಾಡಲಾಗುತ್ತಿದೆ. ರಾಜಾರೋಷವಾಗಿ ಕೈದಿಗಳು ಆರಾಮವಾಗಿ ಇದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ದೀರ್ಘಕಾಲ ಸಿಎಂ ಎಂಬ ವೈಯಕ್ತಿಕ ಕಾರಣ ಬಿಟ್ಟರೆ, ಅಹಿಂದ ಹೆಸರು ಹೇಳಿಕೊಂಡು ಆ ಸಮುದಾಯಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ, ಅಹಿಂದ ಸಮುದಾಯಗಳನ್ನು ತನ್ನ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ದುರ್ಬಳಕೆ ಮಾಡಿಕೊಂಡ ಅಪಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.
ಪಶ್ಚಿಮ ಬಂಗಾಲ, ಅಸ್ಸಾಂನಲ್ಲಿನ ಸೋಲಿನಿಂದ ಹತಾಶವಾದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ ಎಂದು ಆರೋಪಿಸಿದರು. ಈ ಸರಕಾರದ ಆಡಳಿತ ವೈಖರಿಯಿಂದ ಜನರು ಬೇಸತ್ತಿದ್ದಾರೆ. ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಈ ಸರಕಾರಕ್ಕೆ ಜನರು ಪಾಠ ಕಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ?
ತುಮಕೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಆಯೋಜಿಸಿರುವುದು ಯಾವ ಪುರುಷಾರ್ಥಕ್ಕೆ? ಈ ಮೂರು ವರ್ಷದಲ್ಲಿ ಸರ್ಕಾರ ಕಡಿದು ಕಟ್ಟೆ ಹಾಕಿದ್ದು ಏನು ಎಂದು ವಿಜಯೇಂದ್ರ ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಅವಧಿಯ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂಬಂತೆ ಈಗಿನ ಕಾಂಗ್ರೆಸ್ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯಲ್ಲಿ ಭಾರಿ ಸಂಖ್ಯೆಯಲ್ಲಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಈ ಸರ್ಕಾರ ಆಯೋಜಿಸಿತ್ತು. ಅದೂ ಕೂಡ ಬಿಜೆಪಿ ಸರ್ಕಾರದ ನಿರ್ಧಾರ. ಹಳೆ ಸರ್ಕಾರದ ಕೆಲಸಗಳನ್ನು ತಮ್ಮ ಕೆಲಸ ಎಂದು ಜನರಿಗೆ ತೋರಿಸುತ್ತಿದ್ದಾರೆ ಎಂದು ದೂರಿದರು. ತುಮಕೂರು ಸಮಾವೇಶ ನಗೆಪಾಟಲಿಗೆ ಈಡಾಗಿದೆ. ಇದರ ಬಗ್ಗೆ ಜನರೇ ನಗುತ್ತಿದ್ದಾರೆ. ಬಿಜೆಪಿ ಈ ಸಮಾವೇಶಕ್ಕೆ ಕೌಂಟರ್ ಆಗಿ ಏನೂ ಮಾಡುವುದಿಲ್ಲ. ಎಂದರು.
ಇವರು ಏನಾದರೂ ಸಾಧನೆ ಮಾಡಿದ್ದರೆ ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿಗಳು ಹಲವು ದಿನ ಬೀಡು ಬಿಡಬೇಕಾದ ಸ್ಥಿತಿ ಇರುತ್ತಿರಲಿಲ್ಲ. ಮತದಾನಕ್ಕೂ ಮೂರು ದಿನ ಮೊದಲು ಗೃಹಲಕ್ಷ್ಮಿ ಹಣ ನೀಡಿದ್ದಾರೆ. ಜಾಹೀರಾತು ಮೂಲಕ ಆರ್ಥಿಕ ಮತ್ತು ಕಾನೂನು ಸ್ಥಿತಿ ಚೆನ್ನಾಗಿದೆ ಎಂದು ಜನರಿಗೆ ತೋರಿಸುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಸಮಾವೇಶದ ಮೂಲಕ ಮಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಪರಿಣಾಮಕಾರಿಯಾದ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಹೋರಾಟ ಮಾಡದೇ ಹೋಗಿದ್ದೇ ಇದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುತ್ತಿರಲಿಲ್ಲ. ಈ ಸರ್ಕಾರಕ್ಕೆ ಭಂಡತನವಿದೆ. ಏನೇ ನಾವು ಹೋರಾಟ ಮಾಡಿದರೆ ತಾಗುವುದಿಲ್ಲ. ಈ ಭಂಡತನವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ನಾವು ಸಮಯಕ್ಕೆ ಸರಿಯಾಗಿ ಹೋರಾಟ ಮಾಡುತ್ತಿದ್ದೇವೆ. ಈ ಆಟ ಬಹಳ ದಿನ ನಡೆಯುವುದಿಲ್ಲ ಎಂದರು.
ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಮಾವೇಶ..
ಮುಖ್ಯಮಂತ್ರಿ ಕುರ್ಚಿಗೆ ಕಾಳಗ ನಡೆಯುತ್ತಿರುವುದರಿಂದ ನೂರಾರು ಕೋಟಿ ಹಣ ಪೋಲು ಮಾಡಿ ತುಮಕೂರು ಸಮಾವೇಶ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿಯನ್ನು ಉಳಿಸಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಇವರ ಸಾಧನೆ ಏನೂ ಇಲ್ಲ. ಕುರ್ಚಿ ಪೈಪೋಟಿಯಿಂದಾಗಿ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಹೋಗಿದೆ ಎಂದು ಹೇಳಿದರು.
ಮಳೆ ಹಾನಿ ಪರಿಶೀಲನೆಗೆ ಕೊಪ್ಪಳ ಮತ್ತು ಬೇರೆ ಬೇರೆ ಜಿಲ್ಲೆಗೆ ನಮ್ಮ ಪಕ್ಷದ ಮುಖಂಡರು ಭೇಟಿ ನೀಡುತ್ತಿದ್ದಾರೆ. ಆದರೆ ಜಿಲ್ಲಾ ಮಂತ್ರಿಗಳು ತಲೆ ಎತ್ತಿಕೊಂಡು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಹಿಂದೆಯೂ ಅವರು ಪ್ರವಾಸ ಮಾಡಿಲ್ಲ. ಮುಂದೆಯೂ ಹೋಗುವುದಿಲ್ಲ ಎಂದ ಅವರು, ದೇವೇಗೌಡರು ಎನ್ಡಿಗೆ ಬೆಂಬಲ ನೀಡಿದ್ದು ಬಹಿರಂಗ ಸತ್ಯ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕೇಂದ್ರದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಕ್ಕೆ ನಾವು ಬದ್ಧರು. ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ರಾಜ್ಯಸಭೆ ಬಗ್ಗೆ, ವಿಧಾನಸಭೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಇನ್ನೂ ಚರ್ಚೆ ಆರಂಭವಾಗಿಲ್ಲ. ದೆಹಲಿಯಿಂದ ನಿರ್ದೇಶನ ಬಂದಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಪ್ರಧಾನಿಯವರನ್ನು ವಿರೋಧ ಮಾಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ನವರು ವಿರೋಧ ಮಾಡ್ತಾರೆ. ತ್ರಿಭಾμÁ ವಿರೋಧ ಮಾಡುವ ಕಾಂಗ್ರೆಸ್ ನಾಯಕರು ಮಕ್ಕಳು ಸಿಬಿಎಸ್ಇ ಶಾಲೆಯಲ್ಲಿ ತ್ರಿಭಾμÉ ಕಲಿಯುತ್ತಿದ್ದಾರೆ. ಇವರ ಬಳಿ ಬೇರೆ ಬಂಡವಾಳ ಏನೂ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಹಣವನ್ನು ಪೋಲು ಮಾಡ್ತಾ ಇದ್ದಾರೆ ಎಂದರು.
ಶಾಲಾ ಸಮವಸ್ತ್ರ ಎಂದರೆ ಏನು ಎಂದೇ ಕಾಂಗ್ರೆಸ್ಗೆ ಗೊತ್ತಿಲ್ಲ. ಮದರಸಾದಲ್ಲಿ ಹಿಜಾಬ್ ಧರಿಸಲಿ. ಶಾಲೆಗಳಲ್ಲಿ ಹಿಜಾಬ್ಗೆ ಅವಕಾಶ ನೀಡಿ ರಾಜ್ಯ ಸರ್ಕಾರವೇ ಮಕ್ಕಳ ಮನಸ್ಸನ್ನು ಕಲಕುವ ಕೆಲಸ ಮಾಡ್ತಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಇಂತಹ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಕರ್ನಾಟಕಕ್ಕೆ ಬರಲಿದ್ದಾರೆ. 24 ರಂದು ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಮಾಜಿ ಸಚಿವರು ಮತ್ತು ಶಾಸಕರಾದ ಬಿ.ಎ ಬಸವರಾಜ್, ಶಶಿಕಲಾ ಜೊಲ್ಲೆ, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಉಪಸ್ಥಿತರಿದ್ದರು.


