ಅಪಘಾತ ನಿಯಂತ್ರಣಕ್ಕೆ ಶಾಸಕರಿಂದಲೇ ಮ್ಯತ್ಯುಂಜಯ ಜಪ
ಪುತ್ತೂರು ಆಸುಪಾಸಿನಲ್ಲಿ ಈಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು, ಸಾವು, ನೋವುಗಳು ಹೆಚ್ಚಾದ ಕಾರಣ ಮೃತ್ಯುಂಜಯ ಜಪವನ್ನು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ‘ಹತ್ತೂರ ಒಡೆಯ’ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ (ಮೇ 12) ವಿಶಿಷ್ಟ ಕಾರ್ಯಕ್ರಮವೊಂದು ಶಾಸಕ ಅಶೋಕ್ಕುಮಾರ್ ರೈ ಅವರ ನೇತೃತ್ವದಲ್ಲಿ ನಡೆಯಿತು. ಪುತ್ತೂರು ಆಸುಪಾಸಿನಲ್ಲಿ ಎಲ್ಲಾ ಧರ್ಮೀಯರಿಗೂ ಅಪಘಾತಗಳು ಆಗದಿರಲಿ ಎಂದು ಪ್ರಾರ್ಥಿಸಿ ಈ ಜಪ ನಡೆಯಿತು.
ಶಾಸಕರು ಜನರಿಂದ ಆಯ್ಕೆಯಾಗಿ ಬಂದವರು. ಎಲ್ಲಾ ಧರ್ಮೀಯರೂ ಅವರನ್ನು ಆರಿಸಿ ವಿಧಾನಸಭೆಗೆ ಕಳುಹಿಸಿದ್ದಾರೆ. ಹೀಗಾಗಿ ಸರ್ವ ಜನರ ಹಿತ ಬಯಸಿ ಶಾಸಕರು ಈ ಜಪದಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಕಳೆದ ಕೆಲ ತಿಂಗಳಿಂದ ಪುತ್ತೂರು ಆಸುಪಾಸಿನಲ್ಲಿ ಅನೇಕ ಯುವಕರು ಅಪಘಾತದಿಂದ ಮೃತಪಟ್ಟಿದ್ದಾರೆ. ದಿನೇ ದಿನೇ ಈ ರೀತಿಯ ಮೃತ್ಯು ಪ್ರಕರಣಗಳು ಅಧಿಕವಾಗುತ್ತಲೇ ಇದೆ, ಸಾವು ನೋವುಗಳು, ಕುಟುಂಬಗಳ ಆಕ್ರಂದನ ಮುಗಿಲುಮುಟ್ಟುವಂತಿದೆ, ಇದನ್ನು ಕಂಡು ಶಾಸಕ ಅಶೋಕ್ ರೈ ನೊಂದುಕೊಂಡಿದ್ದರು. ಇನ್ನೆಂದೂ ಇಂತಹ ದುರ್ಮರಣಗಳು ತನ್ನ ಕ್ಷೇತ್ರದಲ್ಲಿ ಯಾರಿಗೂ ಸಂಭವಿಸದಿರಲಿ (ಸರ್ವ ಧರ್ಮಿಯರಿಗಾಗಿ) ಎಂದು ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮೃತ್ಯುಂಜಯ ಜಪ ನಡೆಸಿದ್ದಾರೆ. ವೈದಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಶಾಸಕರ ಮನದಾಳದ ಆಶಯದಂತೆ ಯಾರಿಗೂ ಇಂಥಹ ಸಾವು ನೋವು ಸಂಭವಿಸದಿರಲಿ ಎಂದು ನಾವು ಕೂಡಾ ಭಗವಂತನಲ್ಲಿ ಸೇರಿದ್ದ ಎಲ್ಲರು ಪ್ರಾರ್ಥಿಸಿದರು.


