Karnataka Weather: ರಾಜ್ಯದಲ್ಲಿ ಸಾಧಾರಣ ಮಳೆ
Karnataka Weather: ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು: ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಒಂದೆಡರು ಬಾರಿ ಸಾಧಾರಣ ಮಳೆಯಾಗಿದೆ. ಮಲೆನಾಡಿನಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮಡಿಕೇರಿ, ಸೋಮವಾರಪೇಟೆ, ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕುಗಳ ಅಲ್ಲಲ್ಲಿ ಹಗುರ ಮಳೆಯಾಗಿತ್ತು. ಒಳನಾಡಿನ ಬೆಳಗಾವಿಯ ಖಾನಾಪುರ, ಬೀದರ್ ನ ಬಾಲ್ಕಿ, ಮೈಸೂರಿನ ನಂಜನಗೂಡು ತಾಲೂಕುಗಳ ಅಲ್ಲಲ್ಲಿ ಲಘು ಮಳೆಯಾಗಿದೆ.
ಇವತ್ತಿನ ಮುನ್ಸೂಚನೆ ಪ್ರಕಾರ, ಕರಾವಳಿ ಜಿಲ್ಲೆಗಳಲ್ಲಿ ಮೋಡ- ಬಿಸಿಲಿನ ವಾತಾವರಣ ಇರಲಿದ್ದು, ಕಾಸರಗೋಡು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ, ರಾತ್ರಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ. ಮುಂಗಾರು ದುರ್ಬಲವಾದ ಕಾರಣ, ತೀವ್ರ ಬಿಸಿಲಿನ ವಾತಾವರಣ ಆರಂಭವಾಗಿದ್ದು, ಗರಿಷ್ಠ ತಾಪಮಾನ 2-3 ಏರಿಕೆ ಆಗಬಹುದು. ಲೋ ಪ್ರೆಷರ್ ಹಿನ್ನೆಲೆ, ಸೆ.3 ವರೆಗೆ ಪ್ರತಿದಿನ ಒಂದೆರಡು ಬಾರಿ ಮಳೆ ಮುಂದುವರೆಯಬಹುದು. ನಂತರ ಮಳೆ ಕಡಿಮೆಯಾಗುವ ಮುನ್ಸೂಚನೆ ಇದೆ.
ಮಲೆನಾಡಿನ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಜಿಲ್ಲೆಗಳ ಮಡಿಕೇರಿ, ಮೂಡಿಗೆರೆ, ಶೃಂಗೇರಿ, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳ ಘಟ್ಟಪ್ರದೇಶಗಳ ಅಲ್ಲಲ್ಲಿ ಸಾಮಾನ್ಯ ಮಳೆಯಾಗಬಹುದು. ಉಳಿದ ತಾಲೂಕುಗಳಲ್ಲಿ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ಕೆಲವೆಡೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಕಡಿಮೆಯಾಗಿದ್ದು, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯಾಗಲಿದ್ದು, ಸೆಪ್ಟೆಂಬರ್ 1 ರಿಂದ ಮೋಡದ ವಾತಾವರಣ ಮುಂದುವರೆಯಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಿಜಾಪುರ, ಬೀದರ್, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯ ಮುನ್ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ಭಾಗಶಃ ಮೋಡದ ವಾತಾವರಣ ಮುಂದುವರೆಯಲಿದೆ.
ಬಂಗಾಳ ಕೊಲ್ಲಿಯ ಉತ್ತರದಲ್ಲಿ ಉತ್ತರ ಒರಿಸ್ಸಾ, ಪ್ರಶ್ಚಿಮ ಬಂಗಾಳದ ಸಮೀಪವಿರುವ ಲೋ ಪ್ರೆಷರ್ ಪಶ್ಚಿಮದತ್ತ ಚಲಿಸುವ ಸಾಧ್ಯತೆಯಿದೆ. ಇದು ದಕ್ಷಿಣ ಭಾರತಕ್ಕೆ ಜಾಸ್ತಿ ಪ್ರಭಾವ ಬಿರುವುದಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಒಂದು ವಾರ ಪ್ರತಿದಿನ ಒಂದೆರಡು ಬಾರಿ ಮಳೆಯಾಗಬಹುದು. ಒಳನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಕಡಿಮೆಯಿದ್ದು, ಹಿಂಗಾರು ಮಳೆಯಾಗುವ ನಿರೀಕ್ಷೆ ಇದ್ದರೂ ಬರದ ಪರಿಸ್ಥಿತಿ ಮುಂದುವರೆಯಬಹುದು.