ಉತ್ತಮ ಸಂವಹನ ಕೌಶಲ್ಯಗಳು ವೃತ್ತಿ ಜೀವನವನ್ನು ಉತ್ತಮಗೊಳಿಸುತ್ತವೆ: ನೀಮಾ
Puttur: ಈಚೆಗೆ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗಣಕ ಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ಘಟಕ ಆಯೋಜಿಸಿದ್ದ ಬಿಸಿಎ ನಂತರದ ವೃತ್ತಿ ಅವಕಾಶಗಳು, ಉದ್ಯೋಗ ಹಾಗೂ ಉನ್ನತ ಶಿಕ್ಷಣ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಉಪನ್ಯಾಸಕಿ ನೀಮಾ ಭಾಗವಹಿಸಿ, ಮಾತನಾಡಿದರು.
ಪುತ್ತೂರು: 'ಆತ್ಮವಿಶ್ವಾಸ, ಹೊಂದಿಕೊಳ್ಳುವಿಕೆ, ಜವಾಬ್ದಾರಿತನ, ಶ್ರೇಷ್ಠತೆ, ಉದ್ಯೋಗಾರ್ಹತೆ ಕೌಶಲ್ಯಗಳು ಮತ್ತು ಸವಾಲುಗಳನ್ನು ಎದುರಿಸುವುದು ಪ್ರತಿಯೊಬ್ಬರ ವೃತ್ತಿಜೀವನದಲ್ಲಿ ಬಹುಮುಖ್ಯ ಅಂಶಗಳಿವೆ' ಎಂದು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ನೀಮಾ ಹೇಳಿದರು.
ಈಚೆಗೆ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗಣಕ ಶಾಸ್ತ್ರ ವಿಭಾಗ, ಐಕ್ಯೂಎಸಿ ಮತ್ತು ಟ್ರೈನಿಂಗ್ ಆ್ಯಂಡ್ ಪ್ಲೇಸ್ಮೆಂಟ್ ಘಟಕ ಆಯೋಜಿಸಿದ್ದ ಬಿಸಿಎ ನಂತರದ ವೃತ್ತಿ ಅವಕಾಶಗಳು, ಉದ್ಯೋಗ ಹಾಗೂ ಉನ್ನತ ಶಿಕ್ಷಣ ಎಂಬ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಅವರು ಮಾತನಾಡಿದರು.

'ನಮ್ಮ ಜೀವನವನ್ನು ಸಂವಹನ ಕೌಶಲ್ಯಗಳು ಉತ್ತಮಗೊಳಿಸುತ್ತವೆ. ಜೊತೆಗೆ ತಾಂತ್ರಿಕ ಕೌಶಲ್ಯಗಳು, ನಿರಂತರ ಅಭ್ಯಾಸ ವೃತ್ತಿ ಬೆಳವಣಿಗೆಗೆ ಸಹಾಯ ಮಾಡುತ್ತವೆ. ಯಾವುದೇ ಕಂಪನಿಗಳಾದರೂ ಉದ್ಯೋಗಿಯ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಆತ್ಮಶಿಸ್ತು ಹಾಗೂ ಜವಾಬ್ದಾರಿಯುತ ನಡವಳಿಕೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ವಿಶೇಷವಾಗಿ, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮಾತನಾಡುವುದು, ಪ್ರಸ್ತುತೀಕರಣ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಹಾಗೂ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅತ್ಯಗತ್ಯ' ಎಂದರು.
'ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಪಡೆಯಲು ಪಠ್ಯಕ್ರಮದೊಂದಿಗೆ, ಕೌಶಲ್ಯ ಆಧಾರಿತ ಕಲಿಕೆಗೆ ಹೆಚ್ಚಿನ ಪ್ರಯತ್ನ ಮಾಡಬೇಕು. ಹಾಗಾಗಿ ತಮ್ಮ ಸಾಮರ್ಥ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಳ್ಳುವುದು ಮುಖ್ಯ. ಸ್ವಯಂ ಹಾಗೂ ಇತರೆ ಆನ್ಲೈನ್ ಕಲಿಕಾ ವೇದಿಕೆಗಳ ಮೂಲಕ ಹೆಚ್ಚುವರಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು' ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ಗಳ ಬಗ್ಗೆ ಅಗತ್ಯವಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಇದೇ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನೀಮಾ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ವಿವೇಕಾನಂದ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಮತ್ತು ಕೋ-ಆರ್ಡಿನೇಟರ್ ದೀಪಿಕಾ ಉಪಸ್ಥಿತರಿದ್ದರು. ತೃತೀಯ ಬಿಸಿಎ ವಿಭಾಗದ ವಿದ್ಯಾರ್ಥಿನಿ ಕೆ.ದೀಪಿಕಾ ಪ್ರಭು ಸ್ವಾಗತಿಸಿ, ನಿರೂಪಿಸಿದರು.