ಮಂಗಳೂರು: ಸಮಾಜದಲ್ಲಿ ದುಶ್ಚಟಗಳು & ಕೆಟ್ಟ ಕಾರ್ಯಗಳಿಗೆ ಗುರಿಯಾಗಿಸಿ, ಯುವ ಜನರನ್ನು ಹಾಳು ಮಾಡುವ ಚಟುವಟಿಕೆಗಳು ನಡೆಯುತ್ತಲೇ ಇವೆ. ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ನಗರ ಪೋಲೀಸ್ ಉಪ ಆಯುಕ್ತ ಹೆಚ್.ಎನ್.ಮಿಥುನ್ ಹೇಳಿದರು.
ನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಪದವಿ-ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 'ಡ್ರಗ್ಸ್ ವಿರೋಧಿ ಜಾಗೃತಿ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಪ್ರತಿಯೊಬ್ಬರು ಮಾದಕ ವಸ್ತುಗಳ ಬಳಕೆಯು ಯಾವ ರೀತಿಯ ದುಷ್ಟರಿಣಾಮಗಳನ್ನು ಬೀರುತ್ತವೆ ಎಂಬುದನ್ನು ತಿಳಿಯಬೇಕು. ಧೂಮಪಾನ, ಮದ್ಯಪಾನ ಹಾಗೂ ಗುಟ್ಕಾ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತವೆ. ಇದರಿಂದ ನೀವು ಕಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಈ ರೀತಿಯ ವ್ಯಸನಗಳಿಗೆ ಬಲಿಯಾಗುವುದಿಲ್ಲ ಎಂದು ಶಪಥ ತೆಗೆದುಕೊಳ್ಳಬೇಕು' ಎಂದು ಹೇಳಿದರು.
'ಯಾವುದೇ ಸಂದರ್ಭದಲ್ಲಿ ಡ್ರಗ್ಸ್ ಸಂಬಂಧಿತ ದುಷ್ಕೃತ್ಯಗಳು ನಡೆಯುವುದು ಕಂಡು ಬಂದರೆ, ಅದನ್ನು ಭಯವಿಲ್ಲದೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಬೇಕು. ಪೊಲೀಸರು ಇರುವುದು ನಿಮ್ಮ ಕ್ಷೇಮಕ್ಕಾಗಿ, ಸಮಾಜದ ಹಿತಕ್ಕಾಗಿ. ಯಾರಾದರೂ ದುಶ್ಚಟಗಳಿಗೆ ಪ್ರಚೋದಿಸಿದರೆ, ಅದನ್ನು ತಿರಸ್ಕರಿಸಿರಿ. ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ' ಎಂದು ತಿಳಿಸಿದರು.
'ಕ್ಷಣಿಕ ಸುಖದ ಹಿಂದೆ ಹೋಗಿ, ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಯಾವುದು ಒಳ್ಳೆಯದು - ಕೆಟ್ಟದ್ದು ಎಂದು ಅರ್ಥ ಮಾಡಿಕೊಂಡು ಒಳ್ಳೆಯ ವಿದ್ಯಾರ್ಥಿಗಳಾಗಿ ಸಮಾಜಕ್ಕೆ ಮಾದರಿಯಾಗಬೇಕು' ಎಂದರು.
ವಾಮಂಜೂರು ಠಾಣಾ ಅಧಿಕಾರಿ ಅರುಣ್ ಮಾತನಾಡಿ, 'ಒಮ್ಮೆ ದುಶ್ಚಟ ಅಥವಾ ಸಮಾಜ ಘಾತಕ ಚಟುವಟಿಕೆಯಲ್ಲಿ ಸಿಕ್ಕಿಬಿದ್ದರೆ, ಕಾನೂನಿನಡಿ ಶಿಕ್ಷೆಯಾಗುತ್ತದೆ. ನಾವು ಈ ದುಶ್ಚಟಗಳಿಗೆ ಬಲಿಯಾಗದೆ, ಉತ್ತಮ ಜೀವನವನ್ನು ನಮ್ಮದಾಗಿಸೋಣ' ಎಂದು ಹೇಳಿದರು.
'ಪೊಲೀಸ್ ಇಲಾಖೆ ಸಮಾಜದ ಸುವ್ಯವಸ್ಥೆ ಕಾಪಾಡುವ ಕಾಯಕ ಮಾಡುತ್ತಿದೆ. ಒಂದು ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ನಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಇಲಾಖೆಗೂ ಸಹಕರಿಸಬೇಕು. ಆದಷ್ಟು ಕಾನೂನಿನ ಉಲ್ಲಂಘನೆ ಮಾಡುವುದನ್ನು ನಿಲ್ಲಿಸೋಣ' ಎಂದು ತಿಳಿಸಿದರು.
ಕನ್ನಡ ಶಿಕ್ಷಕ ಶರಣಪ್ಪ 'ವ್ಯಸನ ಮುಕ್ತ ಸಮಾಜ ನಿರ್ಮಾಣ' ಎಂಬ ವಿಷಯದ ಕುರಿತು ಜಾಗೃತ ಗೀತೆಯನ್ನು ಹಾಡಿದರು. ಇದೇ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಾಯಿತು.
ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ.ಕೆ.ಸಿ.ನಾೖಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಉಪಸ್ಥಿತರಿದ್ದರು. ಶಿಕ್ಷಕಿ ಪ್ರಿಯಾಂಕಾ ಕಾರ್ಯಕ್ರಮ ನಿರೂಪಿಸಿದರು. ಚೇತನಾ ಸ್ವಾಗತಿಸಿದರು. ಭವ್ಯಶ್ರೀ ವಂದಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.