ಪಲಾಶ: ಕಾಡಿನ ಜ್ವಾಲೆ.. ಇದರ ಪ್ರಯೋಜನಗಳೇನು?
Palash: 'ಪಲಾಶ'ವು ಭಾರತದ ಅತ್ಯಂತ ಪ್ರಸಿದ್ಧ ಔಷಧೀಯ ಹಾಗೂ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದು ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
'ಪಲಾಶ'ವು ಭಾರತದ ಅತ್ಯಂತ ಪ್ರಸಿದ್ಧ ಔಷಧೀಯ ಹಾಗೂ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದನ್ನು ಕನ್ನಡದಲ್ಲಿ ಮುತ್ತುಗದ ಮರ ಎಂದು ಕರೆಯುತ್ತಾರೆ. Butea Monosperma ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ. ವಸಂತ ಋತುವಿನಲ್ಲಿ ಎಲೆಗಳೆಲ್ಲ ಉದುರಿ, ಇಡೀ ಮರವು ಕೆಂಪು-ಕೇಸರಿ ಬಣ್ಣದ ಹೂವುಗಳಿಂದ ತುಂಬಿ, ಕಾಡಿಗೆ ಬೆಂಕಿ ಹಚ್ಚಿದಂತೆ ಕಾಣುವುದರಿಂದ ಇದಕ್ಕೆ 'Flame of the Forest' ಅಥವಾ ಕಾಡಿನ ಜ್ವಾಲೆ ಎಂಬ ಹೆಸರು ಬಂದಿದೆ.
ಸಸ್ಯಶಾಸ್ತ್ರೀಯ ವಿವರ:
ಇದು ಮಧ್ಯಮ ಗಾತ್ರದ ಪರ್ಣಪಾತಿ ವೃಕ್ಷ. ಎಲೆಗಳು 3 ಎಲೆಗಳ ಸಂಯುಕ್ತ ಎಲೆಯಾಗಿರುತ್ತವೆ. ಹೂವುಗಳು ಗಿಳಿಯ ಕೊಕ್ಕಿನ ಆಕಾರದಲ್ಲಿರುತ್ತವೆ. ಕಾಯಿಗಳು ಚಪ್ಪಟೆಯಾಗಿರುತ್ತವೆ. ಬೀಜಗಳು ಕಂದು ಬಣ್ಣದಲ್ಲಿರುತ್ತವೆ. ಇದರ ಕಾಂಡದಿಂದ ಕೆಂಪು ಬಣ್ಣದ ಅಂಟು ಸ್ರವಿಸುತ್ತದೆ, ಇದಕ್ಕೆ ಕಾಮರ್ಕಾ ಅಥವಾ ಪಲಾಶ ನಿರ್ಯಾಸ ಎಂದು ಕರೆಯುತ್ತಾರೆ.
ಆಯುರ್ವೇದದಲ್ಲಿ ಪಲಾಶ:
ಆಯುರ್ವೇದದ ಪ್ರಕಾರ, ಪಲಾಶದ ಪಂಚಾಂಗಗಳೂ ಅಂದರೆ ಬೇರು, ತೊಗಟೆ, ಎಲೆ, ಹೂವು, ಬೀಜ ಮತ್ತು ಅಂಟು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಇದರ ರಸ ಕಹಿ, ಒಗರು ಮತ್ತು ಖಾರವಾಗಿದ್ದು, ಗುಣದಲ್ಲಿ ಲಘು, ಸ್ನಿಗ್ಧ ಮತ್ತು ವೀರ್ಯದಲ್ಲಿ ಉಷ್ಣವಾಗಿದೆ.
ಪ್ರಮುಖ ಉಪಯೋಗಗಳು:
ಬೀಜಗಳು: ಪಲಾಶ ಬೀಜಗಳು ಅತ್ಯುತ್ತಮ ಕೃಮಿನಾಶಕ. ಅದರಲ್ಲೂ ಜಂತುಹುಳಗಳಿಗೆ ಇದು ರಾಮಬಾಣ. ಚರ್ಮರೋಗ, ಹೊಟ್ಟೆನೋವು ಹಾಗೂ ಮಧುಮೇಹಕ್ಕೂ ಉಪಯುಕ್ತವಾಗಿದೆ.
ಹೂವುಗಳು: ಪಲಾಶದ ಹೂವುಗಳು ತಂಪುಕಾರಕ ಮತ್ತು ಮೂತ್ರವರ್ಧಕ. ಇದರ ರಸವು ಮೂತ್ರಕೋಶದ ಉರಿ, ಮೂತ್ರದಲ್ಲಿ ರಕ್ತ ಹೋಗುವುದು ಹಾಗೂ ಸ್ತ್ರೀಯರ ಬಿಳಿಸೆರಗು ಸಮಸ್ಯೆಗೆ ಹಿತಕರ. ಹೂವುಗಳನ್ನು ನೆನೆಸಿದ ನೀರು ಬೇಸಿಗೆಯಲ್ಲಿ ಬಾಯಾರಿಕೆ ಮತ್ತು ದೇಹದ ಉರಿಯನ್ನು ಕಡಿಮೆ ಮಾಡುತ್ತದೆ. ಹಿಂದೆ ಈ ಹೂವುಗಳಿಂದಲೇ ನೈಸರ್ಗಿಕ ಬಣ್ಣವನ್ನು ತಯಾರಿಸಿ ಹೋಳಿ ಹಬ್ಬಕ್ಕೆ ಬಳಸುತ್ತಿದ್ದರು.
ಎಲೆಗಳು & ತೊಗಟೆ: ಎಲೆಗಳು ಹಸಿವನ್ನು ಹೆಚ್ಚಿಸುತ್ತವೆ. ಜೀರ್ಣಶಕ್ತಿಯನ್ನು ಸುಧಾರಿಸುತ್ತವೆ. ಎಲೆಗಳಿಂದ ಮಾಡಿದ ತಟ್ಟೆಗಳು ಊಟಕ್ಕೆ ಬಳಸುತ್ತಾರೆ. ತೊಗಟೆಯ ಕಷಾಯವು ದೇಹದ ಊತ, ಅಜೀರ್ಣ ಮತ್ತು ಅತಿಸಾರವನ್ನು ನಿವಾರಿಸುತ್ತದೆ.
ಅಂಟು (ಕಾಮರ್ಕಾ): ಇದನ್ನು ಬಾಯಿ ಹುಣ್ಣು ಮತ್ತು ಅತಿಸಾರಕ್ಕೆ ಬಳಸುತ್ತಾರೆ. ಮೂಳೆ ಮುರಿತವು ಬೇಗ ಕೂಡಿಸಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.