ಪ್ರಧಾನಿಯವರ ಮನವಿಗೆ ಜನಸ್ಪಂದನೆ: ಆರ್.ಅಶೋಕ್
ನಾವು ಬಳಸುವ ಕಾರುಗಳ ಪೆಟ್ರೋಲ್, ಡೀಸೆಲ್ ಪ್ರಮಾಣವನ್ನು ಶೇ 30ರಿಂದ 50ರಷ್ಟು ಕಡಿಮೆ ಮಾಡಲಿದ್ದೇವೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬೆಂಗಾವಲು ವಾಹನ ಬಳಸಲಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು, ಮೇ 13: ಪ್ರಧಾನಿಯವರು ಪೆಟ್ರೋಲಿಯಂ ಉತ್ಪನ್ನ ಕಡಿಮೆ ಬಳಕೆ, ಚಿನ್ನ ಖರೀದಿ ಮಾಡದೇ ಇರುವುದು ಸೇರಿ ವಿವಿಧ ವಿಷಯಗಳಲ್ಲಿ ವಿನಂತಿ ಮಾಡಿದ್ದಾರೆ. ನಾವು ಕೂಡ ಇದಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಬಳಸುವ ಕಾರುಗಳ ಪೆಟ್ರೋಲ್, ಡೀಸೆಲ್ ಪ್ರಮಾಣವನ್ನು ಶೇ 30ರಿಂದ 50ರಷ್ಟು ಕಡಿಮೆ ಮಾಡಲಿದ್ದೇವೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಬೆಂಗಾವಲು ವಾಹನ ಬಳಸಲಿದ್ದೇವೆ ಎಂದು ತಿಳಿಸಿದರು.
ಯುದ್ಧದ ಕಾರಣ ಪ್ರಪಂಚವೇ ಸಂಕಷ್ಟದಲ್ಲಿದೆ. ಪ್ರಧಾನಿಯವರ ಕೋರಿಕೆಗೆ ಸಾರ್ವಜನಿಕರೂ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು. ಮನೆಯಲ್ಲಿ ಬಳಸುವ ಅಡುಗೆ ಎಣ್ಣೆಯನ್ನೂ ಕಡಿಮೆ ಮಾಡಲು ನನ್ನ ಮನೆಯಲ್ಲಿ ಹೇಳಿದ್ದೇನೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕೇಂದ್ರದ ಸಚಿವರು, ಅಧಿಕಾರಿಗಳು ಈಗಾಗಲೇ ಪ್ರಧಾನಿಯವರ ಕರೆಗೆ ಸ್ಪಂದಿಸಿ ಮೆಟ್ರೋದಂಥ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಮುಂದಾಗಿದ್ದಾರೆ ಎಂದು ಹೇಳಿದರು.


