ಮಂಗಳೂರು ದಸರಾ: ನವದುರ್ಗೆಯರ ಮೂರ್ತಿ ನಿರ್ಮಾಣಕ್ಕೆ ಚಾಲನೆ
Mangaluru Dasara: ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವ ತಯಾರಿಗಳು ಶುರುವಾಗಿದ್ದು, ನವದುರ್ಗೆಯರ ಮೂರ್ತಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಮಂಗಳೂರು: ವಿಶ್ವಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವ ತಯಾರಿಗಳು ಶುರುವಾಗಿವೆ. ಕುದ್ರೋಳಿಯ ಪ್ರಸಿದ್ಧ ಗೋಕರ್ಣನಾಥ ಕ್ಷೇತ್ರದಲ್ಲಿ ನವದುರ್ಗೆಯರು ಮತ್ತು ಶಾರದೆ ಮೂರ್ತಿಗಳ ನಿರ್ಮಾಣ & ಶೃಂಗಾರ ಕಾರ್ಯಕ್ಕೆ ಶುಭ ಮುಹೂರ್ತದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ.
ಅ.11 ರಿಂದ 21 ರವರೆಗೆ ವೈಭವೋಪೇತವಾಗಿ ನಡೆಯಲಿರುವ ಮಂಗಳೂರು ದಸರಾವನ್ನು, ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಅಗತ್ಯ ತಯಾರಿಗಳನ್ನು ಮಾಡಲಾಗುತ್ತಿದೆ. ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನವದುರ್ಗೆಯರ ಮೂರ್ತಿಗಳ ರಚನೆ ಕಾರ್ಯವು ಶಾಸ್ತ್ರೋಕ್ತ ಪೂಜಾವಿಧಿಗಳೊಂದಿಗೆ ಆರಂಭಗೊಂಡಿದೆ.
ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ. ಇದರೊಂದಿಗೆ ದಸರಾ ಮಹೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಳೆಯನ್ನು ಹೆಚ್ಚಿಸುವ ಕಾರ್ಯಗಳಿಗೆ ಚಾಲನೆ ದೊರೆತಂತಾಗಿದೆ.