ಪುರುಷರಕಟ್ಟೆ ಘಟನೆ: ಸಾಂತಪ್ಪ ಗೌಡರ ಕುಟುಂಬಕ್ಕೆ ನ್ಯಾಯ ದೊರಕಿಸಿ.. ಎಸಿ ಮೂಲಕ ರಾಜ್ಯಪಾಲರಿಗೆ ಮನವಿ
Purusharakatte Incident: Provide Justice, Appeal To The Governor Through AC: ಪುರುಷರಕಟ್ಟೆಯಲ್ಲಿ ಸಂಭವಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಆನಡ್ಕದ ಸಾಂತಪ್ಪ ಗೌಡ ಕುಟುಂಬಸ್ಥರು ಹಾಗೂ ಅವರ ಮಗಳಿಗೆ ನ್ಯಾಯ ಒದಗಿಸುವಂತೆ ಬಿಜೆಪಿ ಮುಖಂಡರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಉಪ ಆಯುಕ್ತರ (ಎಸಿ) ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪುತ್ತೂರು: ಇಲ್ಲಿನ ಪುರುಷರಕಟ್ಟೆಯಲ್ಲಿ ಸಂಭವಿಸಿದ್ದ ಘಟನೆಗೆ ಸಂಬಂಧಿಸಿದಂತೆ, ಆನಡ್ಕದ ಸಾಂತಪ್ಪ ಗೌಡ ಕುಟುಂಬಸ್ಥರು ಹಾಗೂ ಅವರ ಮಗಳಿಗೆ ನ್ಯಾಯ ಒದಗಿಸುವಂತೆ ಬಿಜೆಪಿ ಮುಖಂಡರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಪುತ್ತೂರು ಉಪ ಆಯುಕ್ತರ (ಎಸಿ) ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಇಂದು (ಸೋಮವಾರ) ಎಸಿ ಕಚೇರಿ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಜಮಾಯಿಸಿ, ಈ ಘಟನೆಯಲ್ಲಿ ದೂರು ಕೊಟ್ಟಿರುವ ಸಾಂತಪ್ಪ ಗೌಡ ಅವರ ಕುಟುಂಬದವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು. ಈ ವೇಳೆ ಸಾಂತಪ್ಪ ಗೌಡ ಮಗಳು ನೀಡಿರುವ ಎರಡು ಪುಟಗಳ ಮನವಿ ಪತ್ರವನ್ನು ಪುತ್ತೂರು ಎಸಿ ಮೂಲಕ ರಾಜ್ಯಪಾಲರಿಗೆ ಸಲ್ಲಿಕೆ ಮಾಡಲಾಯಿತು. ಇದರಲ್ಲಿ ಆ ದಿನ ಏನೆಲ್ಲ ಬೆಳವಣಿಗೆ ನಡೆದಿತ್ತು ಎಂಬುದನ್ನು ಉಲ್ಲೇಖಿಸಲಾಗಿದೆ.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸಾಂತಪ್ಪ ಗೌಡ ಅವರ ಮಗಳು ಜು.8 ರಂದು ಬೆಳಗ್ಗೆ 6.45ರ ಸುಮಾರಿಗೆ ಕಚೇರಿಗೆ ತೆರಳುವಾಗ, ಚೂರಿ ಹಿಡಿದ ವ್ಯಕ್ತಿಯೊಬ್ಬರು ಹತ್ತಿರದಲ್ಲೇ ಹೋಗಿದ್ದಾರೆ. ಆಕೆಗೆ ಗಾಬರಿಯಾಗಿದೆ. ಆ ಕಾರಣಕ್ಕೆ ಠಾಣೆಗೆ ಹೋಗಿ ದೂರನ್ನು ಕೊಟ್ಟಿದ್ದರು. ಆದರೆ, ದೂರು ಕೊಟ್ಟ ದೂರುದಾರರ ವಿರುದ್ಧವೇ ಪೊಲೀಸರು ಎಫ್ಐಆರ್ ದಾಖಲಿಸಿ, ಠಾಣೆಯಲ್ಲಿ ಸುಮಾರು 5 ತಾಸು ಕಾಯುವಂತೆ ಮಾಡಿದ್ದಾರೆ. ಒಂದು ಹೆಣ್ಣು ಮಗಳು ಈ ರೀತಿ ದೂರು ಕೊಡುವುದಕ್ಕೆ ಠಾಣೆಗೆ ಹೋದಾಗ ಸ್ಪಂದಿಸುವ ಬದಲು, ಆಕೆ ವಿರುದ್ಧವೇ ಕೇಸ್ ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆ, ಆಕೆಗೆ ಹಾಗೂ ಶಾಂತಪ್ಪ ಗೌಡ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿ ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ಆ ಮೂಲಕ, ರಾಜ್ಯಪಾಲರು ಈ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಪುತ್ತೂರು ಎಸಿ ಮನವಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.


