ಬೆಲ್ಜಿಯಂನಲ್ಲಿ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ
ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 13,500 ಕೋಟಿ ರೂ. ಸಾಲ ವಂಚನೆ ಮಾಡಿದ್ದ ಮತ್ತು ಬಂಧನವನ್ನು ತಪ್ಪಿಸಲು ಭಾರತದಿಂದ ಬೆಲ್ಜಿಯಂಗೆ ಪರಾರಿಯಾಗಿದ್ದ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಹಗರಣದಲ್ಲಿ ಪ್ರಮುಖ ಆರೋಪಿಯಾಗಿರುವ ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಕೇಂದ್ರ ತನಿಖಾ ದಳದ (ಸಿಬಿಐ) ಮೇಲ್ಮನವಿಯ ಮೇರೆಗೆ 65 ವರ್ಷದ ಚೋಕ್ಸಿಯನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ 13,500 ಕೋಟಿ ರೂ. ಸಾಲ ವಂಚನೆ ಮಾಡಿದ್ದ ಮತ್ತು ಬಂಧನವನ್ನು ತಪ್ಪಿಸಲು ಭಾರತದಿಂದ ಬೆಲ್ಜಿಯಂಗೆ ಪರಾರಿಯಾಗಿದ್ದ. ಇಲ್ಲಿ ಅವರು ತಮ್ಮ ಪತ್ನಿ ಪ್ರೀತಿ ಚೋಕ್ಸಿ ಅವರೊಂದಿಗೆ ಆಂಟ್ವೆರ್ಪ್ನಲ್ಲಿ ವಾಸಿಸುತ್ತಿದ್ದರು. ಪ್ರೀತಿ ಚೋಕ್ಸಿ ಬೆಲ್ಜಿಯಂ ಪೌರತ್ವವನ್ನು ಹೊಂದಿದ್ದಾರೆ.
ಚೋಕ್ಸಿ ಬೆಲ್ಜಿಯಂನಲ್ಲಿ ‘ಎಫ್ ರೆಸಿಡೆನ್ಸಿ ಕಾರ್ಡ್’ ಹೊಂದಿದ್ದಾರೆ ಮತ್ತು ಅವರು ಚಿಕಿತ್ಸೆಗಾಗಿ ಆಂಟಿಗುವಾದಿಂದ ಬೆಲ್ಜಿಯಂಗೆ ಬಂದಿದ್ದಾರೆ ಎಂದು ಹಲವಾರು ವರದಿಗಳಲ್ಲಿ ಬಹಿರಂಗವಾಗಿದೆ. ಮೆಹುಲ್ ಚೋಕ್ಸಿಯನ್ನು ಬಂಧಿಸುವಾಗ, ಬೆಲ್ಜಿಯಂ ಪೊಲೀಸರು ಮುಂಬೈ ನ್ಯಾಯಾಲಯವು ಅವರ ವಿರುದ್ಧ ಹೊರಡಿಸಿದ ಎರಡು ಬಂಧನ ವಾರಂಟ್ಗಳನ್ನು ಉಲ್ಲೇಖಿಸಿದರು.
ಈ ವಾರಂಟ್ಗಳನ್ನು ಮೇ 23, 2018 ಮತ್ತು ಜೂನ್ 15, 2021 ರಂದು ಹೊರಡಿಸಲಾಗಿದೆ ಎಂದು ವರದಿ ಹೇಳಿದೆ. ಆದಾಗ್ಯೂ, ಮೆಹುಲ್ ಚೋಕ್ಸಿ ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಜಾಮೀನು ಮತ್ತು ತಕ್ಷಣದ ಬಿಡುಗಡೆಯನ್ನು ಕೋರಬಹುದು ಎಂದು ಹೇಳಲಾಗುತ್ತಿದೆ.
ಪಿಎನ್ಬಿಗೆ 13,500 ಕೋಟಿ ರೂ.ಗಳಷ್ಟು ವಂಚನೆ ಮಾಡಿರುವ ಆರೋಪದ ಮೇಲೆ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿವೆ. ಈ ಪ್ರಕರಣದಲ್ಲಿ ಚೋಕ್ಸಿಯವರ ಸೋದರಳಿಯ ನೀರವ್ ಮೋದಿ ಕೂಡ ಆರೋಪಿಯಾಗಿದ್ದು, ಅವರು ಲಂಡನ್ನಲ್ಲಿ ತಲೆಮರೆಸಿಕೊಂಡಿದ್ದಾರೆ ಮತ್ತು ಅವರ ಹಸ್ತಾಂತರವೂ ನಿರೀಕ್ಷೆಯಲ್ಲಿದೆ.
ಮೆಹುಲ್ ಚೋಕ್ಸಿ 2018 ರ ಜನವರಿಯಲ್ಲಿ ತನ್ನ ಸೋದರಳಿಯ ನೀರವ್ ಮೋದಿ ಜೊತೆ ಭಾರತದಿಂದ ಪಲಾಯನ ಮಾಡಿದ್ದ. ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿನ ಸಾಲ ವಂಚನೆ ಪ್ರಕರಣ ಬೆಳಕಿಗೆ ಬರುವ ಮೊದಲೇ ಇಬ್ಬರೂ ದೇಶ ಬಿಟ್ಟು ಹೋಗಿದ್ದರು. ಇದು ಭಾರತದ ಎರಡನೇ ಅತಿದೊಡ್ಡ ಬ್ಯಾಂಕ್ ಹಗರಣವಾಗಿತ್ತು.
ಈ ವಿಷಯ ಬೆಳಕಿಗೆ ಬರುವ ಮೊದಲೇ ಚೋಕ್ಸಿ ಆಂಟಿಗುವಾದ ಪೌರತ್ವ ಪಡೆದಿದ್ದರು. 2021 ರಲ್ಲಿ, ಅವರು ಕ್ಯೂಬಾಗೆ ಹೋಗುತ್ತಿದ್ದಾಗ, ಡೊಮಿನಿಕಾದಲ್ಲಿ ಸಿಕ್ಕಿಬಿದ್ದರು. ಇದಾದ ನಂತರ, ರಾಜಕೀಯ ಪಿತೂರಿಯಿಂದಾಗಿ ಈ ಪ್ರಕರಣಗಳನ್ನು ತನ್ನ ವಿರುದ್ಧ ನಡೆಸಲಾಗುತ್ತಿದೆ ಎಂದು ಮೆಹುಲ್ ಹೇಳಿದ್ದರು. ಭಾರತದಲ್ಲಿರುವ ತನ್ನ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಅಕ್ರಮವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದೂ ಅವರು ಹೇಳಿದ್ದರು.
ಸದ್ಯ ಚೋಕ್ಸಿ ಭಾರತದ ಪೌರತ್ವವನ್ನೂ ತ್ಯಜಿಸಿಲ್ಲ. ಒಂದು ವೇಳೆ ತಾತ್ಕಾಲಿಕವಾಗಿ ಪಡೆದಿರುವ ಬೆಲ್ಜಿಯಂ ಪೌರತ್ವವನ್ನು ಶಾಶ್ವತವಾಗಿ ಪರಿವರ್ತಿಸಿದ್ರೆ, ಮುಂದೆ ಆತ ಯುರೋಪಿಯನ್ ರಾಷ್ಟ್ರಗಳಲ್ಲಿ ಸ್ವತಂತ್ರವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಬಳಿಕ ಆತನನ್ನು ಕರೆತರಲು ಭಾರತಕ್ಕೆ ಕಷ್ಟವಾಗಬಹುದು ಎನ್ನಲಾಗಿದೆ.