ಮೂರ್ತಿ ಚಿಕ್ಕದಾದರೂ ಜಠರಾಗ್ನಿಯ ಕೀರ್ತಿ ದೊಡ್ದದು: ರಾಘವೇಶ್ವರ ಶ್ರೀ
Annabrahma Chaturmasya Dharmasabha: ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಸೋಮವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡಿದರು.
ಗೋಕರ್ಣ: ಜಠರಾಗ್ನಿಯು ಆನೆಯಂತಹ ಬೃಹತ್ ಗಾತ್ರದ ಪ್ರಾಣಿಗಳಲ್ಲಿ ಬಾರ್ಲಿ ಧಾನ್ಯದಷ್ಟು ದೊಡ್ಡದಾಗಿದ್ದರೆ, ಮನುಷ್ಯರಲ್ಲಿ ಇನ್ನೂ ಸಣ್ಣ ಗಾತ್ರದಲ್ಲಿದೆ. ಕೀಟಗಳಲ್ಲಿ ಅತಿ ಸೂಕ್ಷ್ಮವಾಗಿರುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಮಾತು ಜಠರಾಗ್ನಿಗೆ ಹೋಲಿಕೆಯಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ಸೋಮವಾರ 'ಅನ್ನಂ ಬ್ರಹ್ಮ' ಮಾಲಿಕೆಯಲ್ಲಿ ಪ್ರವಚನ ನೀಡಿದರು.

ನಮ್ಮ ಪ್ರಾಚೀನ ಗ್ರಂಥಗಳಲ್ಲಿ, ಇಂತಹ ಅನೇಕ ಅಪೂರ್ವ ಮಾಹಿತಿಗಳಿವೆ. ಈ ಪ್ರವಚನ ಮಾಲಿಕೆಯು ಈ ಕುರಿತು ಬೆಳಕು ಚೆಲ್ಲುವ ಪ್ರಯತ್ನವಾಗಿದ್ದು, ನಮ್ಮನ್ನು ಅರಿತುಕೊಳ್ಳುವ ಭಾಗವಾಗಿದೆ. ಭೇಲ ಸಂಹಿತೆಯಲ್ಲಿ ಆತ್ರೇಯ ಮಹರ್ಷಿಗಳು ಆಹಾರವೇ ದೇಹಕ್ಕೆ ಕಾರಣ ಹಾಗೂ ಸಿಹಿ, ಕಹಿ, ಖಾರ ಸೇರಿದಂತೆ ಷಡ್ರಸಗಳ ಅಸಮರ್ಪಕ ಮಿಶ್ರಣಗಳಿಂದ ವ್ಯಾಧಿ ಉಂಟಾಗುತ್ತದೆ. ಹಾಗಾಗಿ, ಆಹಾರವನ್ನು ಸೇವಿಸುವಾಗ ಷಡ್ರಸಗಳ ಬಗ್ಗೆ ವಿಶೇಷವಾದ ಗಮನವನ್ನು ನೀಡಬೇಕು. ಯಾವುದೋ ಒಂದು ರಸವನ್ನು ಹೆಚ್ಚಾಗಿ ಸೇವಿಸುವುದು ಅನಾರೋಗ್ಯಕ್ಕೆ ಮೂಲ ಎನ್ನಲಾಗಿದೆ ಎಂದರು.
ಅಗ್ನಿಯ ಐದು ವಿಧಗಳು: ವಿಷ್ಣುವಿಗೆ ದಶಾವತಾರಗಳಂತೆ ಅಗ್ನಿಗೆ ಪಂಚಾವತಾರಗಳಿದ್ದು, ನಮ್ಮ ದೇಹದಲ್ಲಿ ಅಗ್ನಿಯು ಐದು ರೂಪದಲ್ಲಿ ಅಭಿವ್ಯಕ್ತವಾಗಿದೆ. ಪಾಚಕಾಗ್ನಿಯು ನಾಭಿಯ ಸ್ಥಾನದಲ್ಲಿ ಇದ್ದರೆ, ರಂಜಕಾಗ್ನಿ ನಾಭಿಗಿಂತ ಸ್ಚಲ್ಪ ಮೇಲಿದೆ. ಸಾಧಕಾಗ್ನಿ ಹೃದಯದ ಭಾಗದಲ್ಲಿದ್ದು, ಆಲೋಚಕಾಗ್ನಿ ಕಣ್ಣಿನ ಸಮೀಪ ಇದೆ. ಭ್ರಾಜಕಾಗ್ನಿ ದೇಹವನ್ನೆಲ್ಲಾ ವ್ಯಾಪಿಸಿದೆ. ಪಾಚಕಾಗ್ನಿ ಆಹಾರವನ್ನು ಪಚನಗೊಳಿಸಿ ದೇಹಕ್ಕೆ ಶಕ್ತಿತುಂಬಿದರೆ, ರಂಜಕಾಗ್ನಿ ರಕ್ತಕ್ಕೆ ಕೆಂಪುಬಣ್ಣ ಕಾರಣ. ಸಾಧಕಾಗ್ನಿಯು ಮುಕ್ತಿಗೆ ಕಾರಣವಾದರೆ, ಆಲೋಚಕಾಗ್ನಿಯು ಜ್ನಾನನೇತ್ರವಾಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿನ ಕಾಂತಿಗೆ ಭ್ರಾಜಕಾಗ್ನಿ ಕಾರಣವಾಗಿದೆ ಎಂದು ವಿವರಿಸಿದರು.

ಭಾಜಕಾಗ್ನಿಯ ವಿವರವನ್ನು ನೀಡುವಾಗ ಆಯುರ್ವೇದ ಗ್ರಂಥಗಳು ಚರ್ಮದ ಏಳು ಪದರಗಳನ್ನು ಉಲ್ಲೇಖಿಸುತ್ತದೆ. ಚರ್ಮದ ಪದರಗಳು ಅತಿ ಸೂಕ್ಷ್ಮವಾಗಿದ್ದು, ಸೂಕ್ಷ್ಮದರ್ಶಕದ ಮೂಲಕ ಮಾತ್ರ ನೋಡ ಬಹುದಾಗಿದೆ. ಆದರೆ ಪ್ರಾಚೀನ ಮಹರ್ಷಿಗಳು ಅವುಗಳನ್ನು ಜ್ಞಾನ ದೃಷ್ಟಿಯಿಂದ ಕಂಡುಕೊಂಡಿದ್ದರು ಎಂದು ಅಭಿಪ್ರಾಯಪಟ್ಟರು.

ಹೊಸದಿಗಂತ ಸಮೂಹದ ಸಿಇಓ ಪ್ರಕಾಶ್ ಪಿ.ಎಸ್, ಉದ್ಯಮಿ ಡಾ.ನಾರಾಯಣ ದೇಶಪಾಂಡೆ, ಡಾ.ಗುರುರಾಜ ದೇಶಪಾಂಡೆ ಉಪಸ್ಥಿತರಿದ್ದರು. ಶ್ರೀಗಳ ಆಶೀರ್ವಾದ ಪಡೆದರು. ಹರ್ಷ ಮಾಂಕನಮೂಲೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ಮೋಹನ್ ಹರಿಹರ ದಿನಪ್ರಧಾನರಾಗಿ ಇದ್ದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್ನಿಂದ ಹಿಡಿದು ಇನ್ಸ್ಟಾ, ಎಕ್ಸ್, ಫೇಸ್ಬುಕ್, ಯೂಟ್ಯೂಬ್, ನ್ಯೂಸ್ ಆಪ್ವರೆಗೆ ಎಲ್ಲ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.