ಬಿಸಿರೋಡ್‌ ಬಸ್‌ ನಿಲ್ದಾಣದ ಬಳಿ 21 ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದ ಯುವಕ

BC Road Murder Case: ಮೃತ ಯುವತಿಯನ್ನು ಬಂಟ್ವಾಳ ಉಳಿಗ್ರಾಮ ನಿವಾಸಿ ಲಾವಣ್ಯ (21) ಎಂದು ಗುರುತಿಸಲಾಗಿದೆ. ಬರ್ಬರವಾಗಿ ದಾಳಿ ಮಾಡಿ ನಾಪತ್ತೆಯಾಗಿರುವ ಯುವಕ ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ನಿವಾಸಿ ಚೇತನ್ (22) ಎಂದು ಗೊತ್ತಾಗಿದೆ.

Jul 16, 2026 - 21:07
Jul 17, 2026 - 10:41
ಬಿಸಿರೋಡ್‌ ಬಸ್‌ ನಿಲ್ದಾಣದ ಬಳಿ 21 ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾದ ಯುವಕ

 ಬಂಟ್ವಾಳ: ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ಯುವಕನೊಬ್ಬ ಹಾಡಹಗಲೇ ಮಾರಕಾಸ್ತ್ರದಿಂದ ಕಡಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮೃತ ಯುವತಿಯನ್ನು ಬಂಟ್ವಾಳ ಉಳಿಗ್ರಾಮ ನಿವಾಸಿ ಲಾವಣ್ಯ (21) ಎಂದು ಗುರುತಿಸಲಾಗಿದೆ. ಇನ್ನೊಂದೆಡೆ, ಮಾರಕಾಸ್ತ್ರದಿಂದ ಬರ್ಬರವಾಗಿ ದಾಳಿ ಮಾಡಿ ನಾಪತ್ತೆಯಾಗಿರುವ ಯುವಕನನ್ನು ಬೆಳ್ತಂಗಡಿ ತಾಲೂಕಿನ ಒಡಿಲ್ನಾಳ ನಿವಾಸಿ ಚೇತನ್ (22) ಎಂದು ಗುರುತಿಸಲಾಗಿದೆ.

ಮಾರಕಾಸ್ತ್ರದಿಂದ ದಾಳಿ ಮಾಡಿರುವ ಚೇತನ್‌ ಸದ್ಯ ತಲೆಮರೆಸಿಕೊಂಡಿದ್ದು, ಆರೋಪಿಯ ಹುಡುಕಾಟಕಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡ ಎಸ್ಪಿ ಅರುಣ್‌ ಕುಮಾರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 ಕರಾವಳಿಯಲ್ಲಿ ಬೆಚ್ಚಿ ಬೀಳಿಸಿದ ಘಟನೆ

ಲಾವಣ್ಯ ಆಫೀಸ್‌ ಕೆಲಸ ಮುಗಿಸಿ ಬಿಸಿ ರೋಡ್‌ನ ಬಸ್‌ ನಿಲ್ದಾಣದಲ್ಲಿ ಬಂದು ಇಳಿದಿದ್ದು, ಅಷ್ಟರಲ್ಲಿ ಯಮನಂತೆ ಬಂದ ಚೇತನ್‌ ಲಾಂಗು ತೆಗೆದು ಆಕೆಯ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ಈ ನರರಾಕ್ಷಸನ ಹುಚ್ಚಾಟ ನೋಡಿ ಇಡೀ ಬಂಟ್ವಾಳ ನಗರವೇ ಸ್ತಬ್ದವಾಗಿ ಹೋಗಿತ್ತು. ಜನರ ಮುಂದೆಯೇ ಈತ ರಾಜಾರೋಷವಾಗಿ ಬಂದು ಯುವತಿ ಲಾವಣ್ಯಳನ್ನು ಕೊಂದು ಓಡಿ ಹೋಗಿದ್ದಾನೆ. ಹಾಡಹಗಲೇ ನಡೆದ ಈ ಘಟನೆಯು ಜನರಲ್ಲಿಯೂ ಸಾಕಷ್ಟು ಆತಂಕ ಮೂಡಿಸಿದೆ.

 ಬಿಸಿ ರೋಡ್‌ನ ಬಸ್‌ ನಿಲ್ದಾಣದ ಬಳಿ ದುಷ್ಕರ್ಮಿಯಿಂದ ದಾಳಿಗೆ ಒಳಗಾದ ಯುವತಿಯು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತ ಯುವತಿಯನ್ನು ಕಕ್ಕೆಪದವು ನಿವಾಸಿ ಲಾವಣ್ಯ(21) ಎಂದು ಗುರುತಿಸಲಾಗಿದೆ.