ಆಗಸ್ಟ್ 15 ರೊಳಗೆ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮ ಗಾಂಧಿ ಹೆಸರು: ಸಚಿವ ಈಶ್ವರ ಖಂಡ್ರೆ
Eshwar Khandre: ಆಗಸ್ಟ್ 15 ರೊಳಗೆ ಗ್ರಾಮ ಪಂಚಾಯಿತಿಗಳಿಗೆ 'ಮಹಾತ್ಮ ಗಾಂಧಿ' ಹೆಸರು ನಾಮಕರಣ ಮಾಡಲು ಗಡುವು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯದ ಎಲ್ಲ 5927 ಗ್ರಾಮ ಪಂಚಾಯಿತಿಗಳಿಗೆ 'ಮಹಾತ್ಮ ಗಾಂಧಿ' ಪಂಚಾಯತಿ ಎಂದು ನಾಮಕರಣ ಮಾಡಲು ಗಡುವು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ (Eshwar Khandre) ಹೇಳಿದರು.
ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಇಂದು (ಮಂಗಳವಾರ) ಪಿಡಿಒ, ಕಾರ್ಯದರ್ಶಿ ಹಾಗೂ ಲೆಕ್ಕ ಸಹಾಯಕರ ವರ್ಗಾವಣೆ ಕೌನ್ಸಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿ, ಅವರು ಮಾತನಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೆಸರನ್ನು ಚಿರಸ್ಥಾಯಿಗೊಳಿಸಲು 2026-27ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿರುವಂತೆ ಎಲ್ಲ ಪಂಚಾಯಿತಿಗಳಿಗೆ ಹೆಸರು ಬದಲಾವಣೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.
ಯುಪಿಎ ಆಡಳಿತಾವಧಿಯಲ್ಲಿ ಗ್ರಾಮ ಸ್ವರಾಜ್ಯದ ಪ್ರತಿಪಾದಕರಾಗಿದ್ದ ಗಾಂಧೀಜಿ ಗೌರವಾರ್ಥ, 'ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ - ಮನ್ರೇಗಾ' ಎಂದು ಹೆಸರಿಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿಯಲ್ಲಿ ಮಹಾತ್ಮ ಗಾಂಧಿ ಹೆಸರನ್ನು ತೆಗೆದು ಹಾಕಿದೆ. ಹೀಗಾಗಿ, ರಾಜ್ಯ ಸರ್ಕಾರ ಎಲ್ಲ ಪಂಚಾಯತಿಗಳಿಗೆ ಗಾಂಧೀಜಿ ಹೆಸರಿಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
'ನಾನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ರಾಜ್ಯಗಳ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರ ಸಮಾವೇಶದಲ್ಲೂ ದೇಶದಲ್ಲಿರುವ ಎಲ್ಲ 2.68 ಕೋಟಿ ಗ್ರಾಮ ಪಂಚಾಯತಿಗಳಿಗೂ ಮಹಾತ್ಮ ಗಾಂಧಿ ಹೆಸರಿಡುವಂತೆ ಆಗ್ರಹಿಸಿದೆ' ಎಂದು ತಿಳಿಸಿದರು.
ವಿಬಿ-ಜಿ ರಾಮ್ ಜಿ ಹೆಸರಿನ ಮುಂದೆ ಗಾಂಧೀಜಿ ಹೆಸರಿಟ್ಟು 'ಮಹಾತ್ಮ ಗಾಂಧಿ ವಿಬಿ-ಜಿ ರಾಮ್ ಜಿ' ಎಂದು ಮರು ನಾಮಕರಣ ಮಾಡುವಂತೆಯೂ ಒತ್ತಾಯಿಸಲಾಯಿತು ಎಂದು ಹೇಳಿದರು.


