ಗದಗ, ಮಂಗಳೂರಿನ ಸರ್ಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್​​ ಬೆದರಿಕೆ

ಮಂಗಳೂರಿನ ಆರ್‌ಟಿಒ ಕಚೇರಿಗೂ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಂಗಳೂರಿನ ನೆಹರು ಮೈದಾನದ ಬಳಿಯ ಆರ್‌ಟಿಒ ಕಚೇರಿಗೆ 5 ಕಡೆ ಬಾಂಬ್‌ ಸ್ಫೋಟಿಸುವುದಾಗಿ ಕಿಡಿಗೇಡಿಗಳಿಂದ ಮೇಲ್​​ ರವಾನಿಸಲಾಗಿದೆ.

Dec 15, 2025 - 17:13
ಗದಗ, ಮಂಗಳೂರಿನ ಸರ್ಕಾರಿ ಕಚೇರಿ ಸ್ಫೋಟಿಸುವುದಾಗಿ ಬಾಂಬ್​​ ಬೆದರಿಕೆ

ಗದಗ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಡಿಸಿ ಕಚೇರಿಗೆ ಬಾಂಬ್​​ ಬೆದರಿಕೆ ಹಾಕಲಾಗಿದೆ. ಪಾಕ್​ನ ಐಎಸ್​​ಐ ಮತ್ತು ಎಲ್​​​ಟಿಟಿಇ ಕಾರ್ಯಕರ್ತರ ಜೊತೆ ಸೇರಿ 5 ಬಾಂಬ್​ಗಳಿಂದ ಜಿಲ್ಲಾಡಳಿತ ಭವನ ಸ್ಫೋಟಿಸುವುದಾಗಿ ಕಿಡಿಗೇಡಿಗಳು ಧಮ್ಕಿ ಹಾಕಿದ್ದಾರೆ. ಸದ್ಯ ಗದಗ ಜಿಲ್ಲಾಡಳಿತ ಭವನದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಶ್ವಾನದಳ, ಬಾಂಬ್ ಪತ್ತೆದಳ ಸಿಬ್ಬಂದಿ ಇಂಚಿಂಚು ತಪಾಸಣೆ ಮಾಡಿದ್ದಾರೆ.
ಅರ್ನಾ ಅಶ್ವಿನ್ ಶೇಖರ್ ಎಂಬ ಇ-ಮೇಲ್ ಐಡಿಯಿಂದ ಬಾಂಬ್​​ ಬೆದರಿಕೆ ಹಾಕಲಾಗಿದೆ. ನಿಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಬಾಂಬ್​​ಗಳನ್ನು ಶೀಘ್ರದಲ್ಲೇ ಸ್ಫೋಟಿಸಲಾಗುವುದು. ಪಾಕಿಸ್ತಾನ-ತಮಿಳುನಾಡು ಡಿಎಂಕೆ 2026ರ ಚುನಾವಣೆಗೆ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.​​ ಸದ್ಯ ಡಿವೈಎಸ್​ಪಿ ಮುರ್ತುಜಾ ಖಾಜಿ, ಸಿಪಿಐ ಲಾಲಸಾಬ್ ಜೂಲಕಟ್ಟಿ, ಸಿದ್ದರಾಮೇಶ್​​, ಪಿಎಸ್ಐ ವ್ಹಿಜಿ ಪವಾರ ಸೇರಿದಂತೆ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ.

ಅದೇ ರೀತಿಯಾಗಿ ಮಂಗಳೂರಿನ ಆರ್‌ಟಿಒ ಕಚೇರಿಗೂ ಇ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ. ಮಂಗಳೂರಿನ ನೆಹರು ಮೈದಾನದ ಬಳಿಯ ಆರ್‌ಟಿಒ ಕಚೇರಿಗೆ 5 ಕಡೆ ಬಾಂಬ್‌ ಸ್ಫೋಟಿಸುವುದಾಗಿ ಕಿಡಿಗೇಡಿಗಳಿಂದ ಮೇಲ್​​ ರವಾನಿಸಲಾಗಿದೆ. ಸದ್ಯ ಆರ್‌ಟಿಒ ಕಚೇರಿಗೆ ಮಂಗಳೂರು ಪೊಲೀಸರು, ಬಾಂಬ್ ನಿಷ್ಕ್ರಿಯ ದಳದಿಂದ ಇಡೀ ಕಟ್ಟಡವನ್ನು ತಪಾಸಣೆ ಮಾಡಲಾಗಿದೆ.

ಇನ್ನು ಇತ್ತೀಚೆಗೆ ಬೀದರ್​​ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿದ್ದೇವೆ ಅದನ್ನ ಆದಷ್ಟು ಬೇಗ ಬ್ಲಾಸ್ಟ್ ಮಾಡಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಮೇಲ್ ಐಡಿಗೆ ಅಪರಿಚಿತರ ಮೇಲ್ ಐಡಿಯಿಂದ ಬೆದರಿಕೆ ಸಂದೇಶ ಬಂದಿತ್ತು.