ವಿಜ್ಞಾನ-ತಂತ್ರಜ್ಞಾನ ಇಲಾಖೆ ಅಧೀನ ಸಂಸ್ಥೆಗಳನ್ನ ಒಗ್ಗೂಡಿಸಲು ಪ್ರಸ್ತಾವನೆ: ಸಚಿವ ಭೋಸರಾಜು

Nov 23, 2023 - 19:32
 14
ವಿಜ್ಞಾನ-ತಂತ್ರಜ್ಞಾನ ಇಲಾಖೆ ಅಧೀನ ಸಂಸ್ಥೆಗಳನ್ನ ಒಗ್ಗೂಡಿಸಲು ಪ್ರಸ್ತಾವನೆ: ಸಚಿವ ಭೋಸರಾಜು

ಬೆಂಗಳೂರು ನವೆಂಬರ್ 23: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಹಲವಾರು ಅಧೀನ ಸಂಸ್ಥೆಗಳಿವೆ. ಆಡಳಿತಾತ್ಮಕ ಅನುಕೂಲತೆಯ ನಿಟ್ಟಿನಲ್ಲಿ ಸಂಸ್ಥೆಗಳನ್ನ ಒಗ್ಗೂಡಿಸುವ ಪ್ರಸ್ತಾವನೆಯನ್ನ ಸಿದ್ದಪಡಿಸುವಂತೆ ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿಕಾಸಸೌಧದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಯೋಜನೆಗಳ ಅನುಷ್ಠಾನವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆಸ್ಟೆಪ್ಸ್), ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿ (ಕೆ.ಎಸ್.ಸಿ.ಎಸ್.ಟಿ), ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆ.ಎಸ್.ಟಿ.ಎ.) ಯಂತಹ ಅಧೀನ ಸಂಸ್ಥೆಗಳಿವೆ. ಈ ಸಂಸ್ಥೆಗಳ ಆಡಳಿತಾತ್ಮಕವಾದ ನಿರ್ವಹಣೆಯನ್ನು ಸುಗಮವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಒಗ್ಗೂಡಿಸುವ ಅವಶ್ಯಕತೆಯಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಈ ಎಲ್ಲಾ ಅಧೀನ ಸಂಸ್ಥೆಗಳಿಗೆ ಅಗತ್ಯ ಅನುದಾನ ನೀಡುವ ಸಂಸ್ಥೆಯಾಗಿ ಅಷ್ಟೇ ಇರದೇ, ಆಡಳಿತಾತ್ಮಕವಾಗಿ ಹೆಚ್ಚಿನ ಅಭಿವೃದ್ದಿಯನ್ನು ತರುವ ನಿಟ್ಟಿನಲ್ಲಿ ಇದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ದಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. 

ಕರ್ನಾಟಕ ರಿಸರ್ಚ್ ಫೌಂಡೇಷನ್ ಸ್ಥಾಪನೆಯ ನಿಟ್ಟಿನಲ್ಲಿ ಸದ್ಯದಲ್ಲೇ ಅಧಿಕೃತ ಆದೇಶವನ್ನು ಹೊರಡಿಸಲಾಗುವುದು. ರಾಜ್ಯದಲ್ಲಿ ಸ್ಥಾಪನೆಯಾಗುವ ವಿಜ್ಞಾನ ಕೇಂದ್ರಗಳು ಹಾಗೂ ತಾರಾಲಯಗಳಿಗೆ ಏಕರೂಪದ ವಿಸ್ತ್ರುತ ಯೋಜನೆಯನ್ನ (ಡಿಪಿಆರ್) ರಚಿಸಬೇಕು. ಹೊಸದಾಗಿ ನಿರ್ಮಾಣವಾಗುವ ಎಲ್ಲಾ ಕೇಂದ್ರಗಳಿಗೂ ಅದು ಅನ್ವಯವಾಗುವಂತಹ ಯೋಜನೆ ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿಜ್ಞಾನ ನಗರದ ಸ್ಥಾಪನೆಯ ನಿಟ್ಟಿನಲ್ಲಿ ಬೆಂಗಳೂರು ನಗರದ ಜಾರಕಬಂಡೆ, ನಂದಿಬೆಟ್ಟದ ಹತ್ತಿರ ಹಾಗೂ ವಿಮಾನ ನಿಲ್ದಾಣದ ಬಳಿ ಕೈಗಾರಿಕಾ ಇಲಾಖೆಯ ಅಧೀನದಲ್ಲಿರುವ ಜಾಗದ ಬಗ್ಗೆ ಇಲಾಖೆಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಸೈನ್ಸ್ ಸಿಟಿ ಗೆ ಅಗತ್ಯ ಜಾಗ ಮಂಜೂರು ಮಾಡುವ ನಿಟ್ಟಿನಲ್ಲಿ ಕಂದಾಯ ಮತ್ತು ಕೈಗಾರಿಕಾ ಇಲಾಖೆ ಸಚಿವರೊಂದಿಗೆ ಚರ್ಚಿಸುವುದಾಗಿ ಸಚಿವರು ತಿಳಿಸಿದರು. 

ಸಭೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಏಕ್ರೂಪ್ ಕೌರ್, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಕುಮಾರ್ ಮಾಲಪಾಟಿ ಮತ್ತು ಅಧಿಕಾರಿಗಳು ಉಪಸ್ಥಿತಿತರಿದ್ದರು.