ಜಾಮೀನು ಸಿಗುವ ನಿರೀಕ್ಷೆಯಲ್ಲಿ ನಟ ದರ್ಶನ್
ಮಧ್ಯಂತರ ಜಾಮೀನಿಗೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಮುಗಿದಿದೆ. ಅರ್ಜಿ ವಿಚಾರಣೆಯ ತೀರ್ಪನ್ನು ನಾಳೆಗೆ (ಅಕ್ಟೋಬರ್ 30) ಕಾಯ್ದಿರಿಸಲಾಗಿದೆ.

ಅನಾರೋಗ್ಯದ ಕಾರಣ ನೀಡಿ ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ತೀವ್ರ ಬೆನ್ನು ನೋವು ಇರುವುದರಿಂದ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದೆ. ಹಾಗಾಗಿ ಅವರ ಪರ ವಕೀಲರಾದ ಸಿ.ವಿ. ನಾಗೇಶ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟ್ನಲ್ಲಿ ಎರಡು ದಿನಗಳ ಕಾಲ ಇದರ ವಿಚಾರಣೆ ನಡೆಸಲಾಗಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ಈ ಅರ್ಜಿಯ ಆದೇಶವನ್ನು ಬುಧವಾರಕ್ಕೆ (ಅ.30) ಕಾಯ್ದಿರಿಸಲಾಗಿದೆ. ಅವರಿಗೆ ಇರುವ ಆರೋಗ್ಯ ಸಮಸ್ಯೆ ಗಂಭೀರವಾದದ್ದು ಎಂದು ನ್ಯಾಯಾಲಯದ ಗಮನಕ್ಕೆ ತರುವ ಪ್ರಯತ್ನವನ್ನು ವಕೀಲರು ಮಾಡಿದ್ದಾರೆ.ಹೆಚ್ಚಿನ ಚಿಕಿತ್ಸೆಯ ಕಾರಣದಿಂದ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಸಿರುವುದರಿಂದ ಆಸ್ಪತ್ರೆಗೆ ಭೇಟಿ ನೀಡುವುದೇ ಅವರ ಮೊದಲ ಆದ್ಯತೆ ಆಗಿರಲಿದೆ. ಹಾಗಾಗಿ ಯಾವುದೇ ಸಂಭ್ರಮಾಚರಣೆಯಲ್ಲಿ ಅಥವಾ ಸುದ್ದಿಗೋಷ್ಠಿಯಲ್ಲಿ ಅವರು ಭಾಗಿ ಆಗುವುದು ಅನುಮಾನ. ಬೆಂಗಳೂರು ಅಥವಾ ಮೈಸೂರಿಯಲ್ಲಿ ಅವರಿಗೆ ಸರ್ಜರಿ ಅಥವಾ ಹೆಚ್ಚುವರಿ ಚಿಕಿತ್ಸೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಜಾಮೀನು ಸಿಗದಿದ್ದರೆ ಬಳ್ಳಾರಿಯಲ್ಲೇ ಅವರಿಗೆ ಚಿಕಿತ್ಸೆ ಕೊಡಿಸುವ ಸಾಧ್ಯತೆ ಇರುತ್ತದೆ. ಬುಧವಾರ ಹೈಕೋರ್ಟ್ ನೀಡುವ ಆದೇಶದ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ.
ವಿಚಾರಣಾಧೀನ ಖೈದಿಗೆ ಚಿಕಿತ್ಸೆ ಪಡೆಯುವ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಜಾಮೀನು ಸಿಗಬಹುದು ಎಂಬ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈ ವಾರ ಬಳ್ಳಾರಿ ಜೈಲಿಗೆ ಭೇಟಿ ನೀಡಿಲ್ಲ. ಹೇಗಿದ್ದರೂ ಜಾಮೀನು ಸಿಗುತ್ತದೆ, ನಂತರವೇ ಹೋಗೋಣ ಎಂದು ಅವರು ತೀರ್ಮಾನಿಸಿದಂತಿದೆ. ಹಾಗಾಗಿ ಅವರು ಜೈಲು ಭೇಟಿಯನ್ನು ಮುಂದೂಡಿದ್ದಾರೆ.
ಮಂಗಳವಾರ ಬೆಳಗ್ಗೆ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ದರ್ಶನ್ ಅವರು ಬಳ್ಳಾರಿ ಜೈಲಿನಿಂದ ತಮ್ಮ ವಕೀಲರ ಜೊತೆ ಮಾತನಾಡಿದ್ದಾರೆ. ಜಾಮೀನು ಸಿಗುವ ಬಗ್ಗೆ ವಕೀಲರು ಭರವಸೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಆಗಲಿದೆ. 120 ದಿನಗಳಿಗೂ ಅಧಿಕ ಕಾಲ ಜೈಲಿನಿಂದ ಹೊರಬರಲಿರುವ ದರ್ಶನ್ಗೆ ಭರ್ಜರಿ ಸ್ವಾಗತ ಕೋರಲು ಫ್ಯಾನ್ಸ್ ಸಿದ್ಧರಾಗಿದ್ದಾರೆ.